ಬೆಂಗಳೂರು, : ರಾಜ್ಯದಲ್ಲೀಗ ಮತ್ತೆ ಸಂಪುಟ ವಿಸ್ತರಣೆಯ ಸರ್ಕಸ್ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರದಲ್ಲಿಯೇ ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ. ಆದರೆ, ಸಚಿವಾಕಾಂಕ್ಷಿಗಳಲ್ಲಿ ಮಾತ್ರ ಮೊದಲಿನ ಉತ್ಸಾಹ ಕಾಣುತ್ತಿಲ್ಲ. ಎಲ್ಲರ ಚಿತ್ತ ಈಗಾಗಲೇ ಚುನಾವಣೆಯತ್ತ ಬೀರಿದ್ದು, ಸಚಿವ ಸ್ಥಾನ ಯಾರಿಗೆ ಬೇಡ ಎಂಬ ವಾತಾವರಣ ನಿರ್ಮಾಣವಾಗಿದೆಯಂತೆ.
ಹೌದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷ ಸಮೀಪಿಸುತ್ತಿದೆ. ಸಚಿವ ಸಂಪುಟ ವಿಸ್ತರಣೆ ಎಂಬುದು ಗಜಪ್ರಸವವವಾಗಿ ಹತ್ತಾರು ಬಾರಿ ದೆಹಲಿಗೆ ಹೋಗಿ ಬಂದರೂ ಖಾಲಿ ಕೈಯಲ್ಲೆ ಬಂದಿದ್ದರು. ಸಂಕ್ರಾಂತಿ, ಯುಗಾದಿ, ಆಷಾಢ ಮಾಸ, ದಸರಾ, ದೀಪಾವಳಿ ಹೀಗೆ ಇದು ಕಳೆದ ಮೇಲೆ, ಅದು ಕಳೆದ ಮೇಲೆ ಎಂದು ನಿರೀಕ್ಷೆ ಇಟ್ಟುಕೊಂಡವರೆಲ್ಲಾ ಕಳೆದೊಂದು ವರ್ಷದಿಂದ ಕಾದು ಕಾದು ಬೇಸರಗೊಂಡಿದ್ದಾರೆ. ಈಗ ಬೊಮ್ಮಾಯಿಯವರೇ ಉತ್ಸಾಹದಿಂದ ಸಂಪುಟ ವಿಸ್ತರಣೆ ಬಗ್ಗೆ ಓಡಾಡುತ್ತಿದ್ದರೂ ಸಹ ಯಾರಿಗೂ ಆಸಕ್ತಿ ಕಾಣುತ್ತಿಲ್ಲ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್ಗೆ ಚುನಾವಣೆ ಘೋಷಣೆ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ಕಳೆದ ನಂತರವೇ ಚುನಾವಣೆ ನಡೆಯುವುದು ಬಹುತೇಕ ಖಚಿತ. ಮೇ ತಿಂಗಳಿಗೆ ಹೊಸ ಸರ್ಕಾರ ಬರುವ ರೀತಿಯಲ್ಲಿ ವೇಳಾಪಟ್ಟಿ ಸಿದ್ಧವಾಗುತ್ತದೆ. ಹಾಗೆ ನೋಡಿದರೆ ಚುನಾವಣೆ ಘೋಷಣೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಇಂತಹ ದಿನಗಳಲ್ಲಿ ಬಹುತೇಕ ಶಾಸಕರು ತಮ್ಮ ಪ್ರವಾಸಗಳನ್ನೆಲ್ಲಾ ರದ್ದು ಮಾಡಿ ಕ್ಷೇತ್ರದಲ್ಲಿಯೇ ಸುತ್ತಾಡಲು, ಜನರ ಕಷ್ಟ ಸುಖ ಕೇಳಲು ಇದು ವಿಶೇಷ ಸಮಯ. ಒಂದು ದಿನವೂ ಕ್ಷೇತ್ರವನ್ನು ಬಿಟ್ಟು ಆಚೆ ಹೋಗಲು ಇಷ್ಟಪಡುವುದಿಲ್ಲ. ಹೀಗೆ ನಾಲ್ಕಾರು ದಿನ ಕಾಣಿಸಿಲ್ಲ ಎಂದರೆ ವಿರೋಧಿಗಳು ಮತ್ತೇನು ಮಾಡಿಯಾರೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸಚಿವರಾಗುವುದಕ್ಕೆ ಅಥವಾ ಸಚಿವರಾಗಿ ರಾಜ್ಯ ಸುತ್ತುವುದಕ್ಕೆ ಬಹುತೇಕರು ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಅಗತ್ಯವಿದ್ದರೆ ಮಾತ್ರ ಬೆಂಗಳೂರು
ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಶಾಸಕರು ಬೆಂಗಳೂರಿನತ್ತ ಮುಖ ಮಾಡುವುದಿಲ್ಲ. ಯಾವಾಗಲೂ ಕ್ಷೇತ್ರದಲ್ಲಿಯೇ ಕಾಣಸಿಗುತ್ತಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಗ್ರಾಮಗಳನ್ನು ಸುತ್ತುತ್ತಿರುತ್ತಾರೆ. ಹಾಗೂ ಹೀಗೂ ಬೆಂಗಳೂರಿನಲ್ಲಿಯೇ ಕೆಲಸ ಇದೆ ಎಂದಾದರೆ ವಾರಾಂತ್ಯದಲ್ಲಿ ಒಂದು ದಿನ ಹೀಗೆ ಬಂದು ಹಾಗೆ ಹೋಗುವ ಶಾಸಕರೇ ಹೆಚ್ಚು. ಈಗ ಮಂತ್ರಿಗಿರಿ ಕೊಟ್ಟರೆ ರಾಜ್ಯವೆಲ್ಲಾ ಸುತ್ತಾಡುವ ಜವಾಬ್ದಾರಿ ವಹಿಸುತ್ತಾರೆ. ಹೀಗೆ ಕ್ಷೇತ್ರ ಬಿಟ್ಟು ರಾಜ್ಯ ಸುತ್ತಲು ಹೋದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಾದರೂ ಹೇಗೆ ಎಂಬ ಆತಂಕ ಬಹುತೇಕರನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.