ನವದೆಹಲಿ,ಮೇ2-ದೇಶವನ್ನು ಕಾಡುತ್ತಿರುವ ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಅನೇಕ ಮಾರ್ಗೋಪಾಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಕೊಡುಗೆ ನೀಡಿ ಅಪಾರ ಸಾವುನೋವಿಗೆ ಕಾರಣವಾಗಿರುವ ಚೀನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಮೆರಿಕ, ಜಪಾನ್ ಸೇರಿದಂತೆ ಅನೇಕ ದೇಶಗಳು ಕಮ್ಯುನಿಸ್ಟ್ ರಾಷ್ಟ್ರದಿಂದ ತನ್ನ ಕಂಪನಿಗಳನ್ನು ಹಿಂದಕ್ಕೆ ಕರೆಸಿಕೊಂಡಿವೆ.
ಇದರ ಸದಾವಕಾಶ ಪಡೆಯುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಚತುರ ನಡೆ ಅನುಸರಿಸಿದ್ದಾರೆ. ಚೀನಾದಿಂದ ನಿರ್ಗಮಿತ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಭಾರತದತ್ತ ಆಕರ್ಷಿಸಿ ಇಲ್ಲಿ ಬಂಡವಾಳ ಹೂಡಲು ಪೂರಕವಾದ ವಾತಾವರಣ ಸೃಷ್ಟಿಸುತ್ತಿದ್ದಾರೆ.
ಇದೇ ವೇಳೆ ಅನೇಕ ದೇಶಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದ್ದು, ಇದರ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ಮೋದಿ ಸಂಪುಟದ ಹಿರಿಯ ಸಚಿವರೊಂದಿಗೆ ಇಂದು ಬೆಳಗ್ಗೆ ಮಹತ್ವದ ಸಮಾಲೋಚನೆ ನಡೆಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದಾಗಿ ದೇಶದ ಸ್ವಾವಲಂಬನೆ ಸಾಕಷ್ಟು ಸುಧಾರಣೆಯಾಗಿದ್ದು, ಇದನ್ನು ಮುಂದುವರೆಸುವ ನಿಟ್ಟಿನಲ್ಲಿ ಮತ್ತು ಮೇಕ್ಇನ್ ಇಂಡಿಯಾ ಮತ್ತಷ್ಟು ವೇಗ ನೀಡಲು ದೇಶದಲ್ಲೇ ಎಲೆಕ್ಟ್ರಾನಿಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ತಯಾರಿಸಲು ಅವರು ಒಲವು ತೋರಿದ್ದಾರೆ.ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿ ಸಂಸ್ಥೆಗಳಿಗೆ ರತ್ನಗಂಬಳಿ ಸ್ವಾಗತ ನೀಡಲು ಪೂರಕವಾದ ವಾತಾವರಣ ನಿರ್ಮಿಸುವಂತೆ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ,ಹಣಕಾಸು ಮತ್ತು ವಾಣಿಜ್ಯ ಇಲಾಖೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ