ಬೆಂಗಳೂರು,- ಕೋವಿಡ್ -19 ಸಂದರ್ಭದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಇಲ್ಲವೇ ಅಪಘಾತಕ್ಕೆ ತುತ್ತಾದ ಕೊರೊನಾ ವಾರಿಯರ್ಸ್ಗಳಿಗೆ ಕೇಂದ್ರ ಸರ್ಕಾರ 50 ಲಕ್ಷ ವಿಮಾ ಸೌಲಭ್ಯವನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಈ ಯೋಜನೆಯ ಸೌಲಭ್ಯ ಒದಗಿಸಲಾಗಿದ್ದು, ಮತ್ತೆ ಈ ಸೌಲಭ್ಯವನ್ನು 6 ತಿಂಗಳಿಗೆ ವಿಸ್ತರಿಸಲಾಗಿದೆ.
ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಅಥವಾ ಶುಶ್ರೂಷೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರುಗಳಾದ ಖಾಸಗಿ ಆಸ್ಪತ್ರೆ ಸಿಬ್ಬಂದಿ, ನಿವೃತ್ತ ಸ್ವಯಂ ಸೇವಕರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪಾಕೇಜ್ನಡಿ 50 ಲಕ್ಷ ವಿಮಾ ಪರಿಹಾರ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.
ಆರೋಗ್ಯ ಕಾರ್ಯಕರ್ತರು ಆಕಸ್ಮಿಕವಾಗಿ ಕೋವಿಡ್ಗೆ ತುತ್ತಾಗಿ ಜೀವಹಾನಿಯಾದರೆ ಇಲ್ಲವೇ ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಮರಣ ಹೊಂದಿದರೆ ಅವರ ಕುಟುಂಬಸ್ಥರಿಗೆ ವಿಮೆ ಸೌಲಭ್ಯ ದೊರಕಲಿದೆ.
ಸೆಪ್ಟೆಂಬರ್ 25ರಿಂದ ಅನ್ವಯವಾಗುವಂತೆ 180 ದಿನದೊಳಗೆ ಸಂಬಂಧಪಟ್ಟವರು ವಿಮೆ ಸೌಲಭ್ಯ ಪಡೆಯಲು ಇಚ್ಚಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆಯಬಹುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಚಿರಂಜೀವಿ ತಿಳಿಸಿದ್ದಾರೆ.