ಬೆಂಗಳೂರು(ಏ.14): ಹಗಲಿರುಳು ಎನ್ನದೇ ಕೊರೋನಾ ವಿರುದ್ಧ ಅವಿರತವಾಗಿ ಹೋರಾಡುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಾಗ್ರಿ ಖರೀದಿಸಲು ಎಸ್ಡಿಆರ್ಎಫ್ ನಿಧಿಯಿಂದ 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ಪೊಲೀಸರು ಮಹಾಮಾರಿ ಕೊರೋನಾ ವೈರಸ್ ಹರಡುವಿಕೆ ನಡೆಯಲು ಹಗಲಿರುಳೆನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ರಸ್ತೆಗಳಲ್ಲಿ ನಿಂತು ಬಂದೋಬಸ್ತ್ ನಲ್ಲಿ ತೊಡಗಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಕೊರೋನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕಾಗಿದೆ. ಹೀಗಾಗಿ ರಕ್ಷಣಾ ಸಾಮಾಗ್ರಿ ಖರೀದಿಸಲು ಎಸ್ಡಿಆರ್ಎಫ್ 5 ಕೋಟಿ ಅನುದಾನ ನೀಡಲು ಮುಂದಾಗಿದೆ.
ಪೊಲೀಸ್ ಇಲಾಖೆಯು ಪೊಲೀಸರ ಆರೋಗ್ಯ ಮತ್ತು ರಕ್ಷಣೆ ಸಲುವಾಗಿ 10 ಕೋಟಿ ಹಣ ನೀಡುವಂತೆ ಮನವಿ ಮಾಡಿತ್ತು. ಜೊತೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಣ ಬಿಡುಗಡೆಗೆ ಮನವಿ ಸಲ್ಲಿಸಿತ್ತು. ಪೊಲೀಸ್ ಇಲಾಖೆಯ ಮನವಿಯನ್ನು ಪರಿಗಣಿಸಿದ ಕಂದಾಯ ಇಲಾಖೆ 5 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ಸದ್ಯ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮತ್ತು ಪ್ರೊಟೆಕ್ಟ್ ಸೂಟ್ ಖರೀದಿ ಮಾಡಲೆಂದು ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಣ ಬಳಕೆ ಮಾಡಬೇಕು. ಅನುದಾನ ಬಳಕೆಯಲ್ಲಿ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಕಂದಾಯ ಇಲಾಖೆ ಹಣ ಬಿಡುಗಡೆ ಮಾಡಿದೆ.