ಬೆಂಗಳೂರು: ಖಗೋಳ ಪ್ರಿಯರಿಗೆ ಗುಡ್ನ್ಯೂಸ್. ಇಂದಿನಿಂದ ಮೇ 25ರವರೆಗೆ ನೀವು ಬರಿಗಣ್ಣಿನಲ್ಲಿ ಬೆಳಗಿನ ಜಾವ ಧೂಮಕೇತುವನ್ನು ವೀಕ್ಷಿಸಬಹುದು.
ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ‘ಸ್ವಾನ್’ ಹೆಸರಿನ ಧೂಮಕೇತು ಭೂಮಿಯ ಸಮೀಪ ಬರುತ್ತಿದೆ. ಆರಂಭದ ದಿನದಲ್ಲಿ ಬೆಳಿಗ್ಗೆ 4.30ರ ವೇಳೆಗೆ `ಸ್ವಾನ್’ ಧೂಮಕೇತು ಕಾಣಿಸಿಕೊಳ್ಳಲಿದೆ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆರಂಭದ ದಿನಗಳಲ್ಲಿ ಕತ್ತಲಿನಲ್ಲಿ ಇದು ಪ್ರಕಾಶಮಾನವಾಗಿ ಕಾಣುವುದರಿಂದ ಬರಿಗಣ್ಣಿನಲ್ಲಿ ವೀಕ್ಷಿಸಬಹುದು. ಸೂರ್ಯೋದಯದ ನಂತರ ವೀಕ್ಷಿಸಬೇಕಾದರೆ ದೂರದರ್ಶಕ ಬೇಕಾಗುತ್ತದೆ. ದಿನದಿಂದ ದಿನಕ್ಕೆ ಧೂಮಕೇತು ಕಾಣಿಸುವ ಸಮಯ ಬದಲಾಗುತ್ತದೆ.
ಸ್ವಾನ್ ವಿಶೇಷತೆ ಏನು?
ಭೂಮಿಯ ಸಮೀಪವೇ ಧೂಮಕೇತುಗಳು ಬರುವುದು ಬಹಳ ಕಡಿಮೆ. ಈ ಸ್ವಾನ್ ಭೂಮಿಯಿಂದ 8.33 ಕೋಟಿ ಕಿ.ಮೀ. ದೂರದಲ್ಲಿ ಸಂಚರಿಸಲಿದ್ದು, ಸೆಕೆಂಡಿಗೆ ಸೆಕೆಂಡ್ಗೆ 40 ಕಿ.ಮೀ.ನಿಂದ 50 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಮೇ 12 ರಂದು ಭೂಮಿಯಿಂದ 8.3 ಕೋಟಿ ಕಿ.ಮೀ. ದೂರದಲ್ಲಿದ್ದರೆ ಮೇ 27ಕ್ಕೆ ಸೂರ್ಯನ ಸಮೀಪ ಹಾದು ಹೋಗುತ್ತದೆ.
ದಿನದಿಂದ ದಿನಕ್ಕೆ ಸ್ವಾನ್ ಪ್ರಕಾಶ ಹೆಚ್ಚಾದರೂ ಸೂರ್ಯನ ಸೂರ್ಯನ ಸಮೀಪಕ್ಕೆ ಹೋಗುವುದರಿಂದ ಸೂರ್ಯನ ಪ್ರಖರ ಬೆಳಕಲ್ಲಿ ಧೂಮಕೇತು ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ದಕ್ಷಿಣ ಗೋಳಾರ್ಧವನ್ನೂ ಪ್ರವೇಶಿಸುವುದರಿಂದ ಕರ್ನಾಟಕ ಸೇರಿದಂತೆ ಭಾರತದ ಹಲವೆಡೆ ಸ್ವಾನ್ ಕಾಣಿಸಲಿದೆ.