ಬೆಂಗಳೂರು: ಮಹೇಶ್ ಬಾಬು ಅಭಿನಯದ ಹೊಸ ಚಿತ್ರಕ್ಕೆ ವಿಲನ್ ಆಗಿ ಕಿಚ್ಚ ಸುದೀಪ್ ಅವರನ್ನು ಕರೆತರಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಹೌದು ಮಹೇಶ್ ಬಾಬು ಅಭಿನಯದ ಮುಂದಿನ ಚಿತ್ರ ಸರ್ಕಾರು ವಾರಿ ಪಾಟದಲ್ಲಿ ಕಿಚ್ಚನನ್ನು ವಿಲನ್ ಆಗಿ ನೋಡಲು ಚಿತ್ರತಂಡ ಬಯಸಿದೆ. ಚಿತ್ರದ ನಿರ್ದೇಶಕ ಪರುಶುರಾಮ್ ಅವರು ಮಹೇಶ್ ಬಾಬುಗೆ ಟಕ್ಕರ್ ಕೊಡಲು ಮತ್ತು ಆ ವಿಲನ್ ಪಾತ್ರಕ್ಕೆ ಜೀವ ತುಂಬಲು ಸುದೀಪ್ ಅವರೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಲಾಕ್ಡೌನ್ ನಡುವೆಯೇ ಈ ಬಗ್ಗೆ ಕಿಚ್ಚನ ಜೊತೆ ಮಾತನಾಡಲು ಚಿತ್ರತಂಡ ಪ್ರಯತ್ನ ಮಾಡಿದೆ. ಆದರೆ ಅದೂ ಸಾಧ್ಯವಾಗಿಲ್ಲ. ಎಲ್ಲ ಅಂದುಕೊಂಡಂತೆ ಆಗಿ ಕಿಚ್ಚ ಒಪ್ಪಿಕೊಂಡರೇ ಮಹೇಶ್ ಬಾಬು ಅವರ ಮುಂದಿನ ಸಿನಿಮಾದಲ್ಲಿ ಕಿಚ್ಚ ವಿಲನ್ ಆಗಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಪರುಶುರಾಮ್ ನಿರ್ಮಾಪರ ಜೊತೆಯೂ ಮಾತನಾಡಿದ್ದು ಅವರು ಕೂಡ ಸುದೀಪ್ ಅವರನ್ನು ಒಪ್ಪಿಸಲು ಸಿದ್ಧವಾಗಿದ್ದಾರೆ ಎನ್ನಲಾಗಿದೆ.
ಕಿಚ್ಚ ಸುದೀಪ್ ಅವರಿಗೆ ಭಾರತದ ಎಲ್ಲಡೇ ಅಭಿಮಾನಿಗಳು ಇದ್ದಾರೆ. ಅವರು ಈಗಾಗಲೇ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ನಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಜೊತೆಗೂ ಬಾಲಿವುಡ್ನಲ್ಲೂ ತನ್ನ ಚಾಪೂ ಮಾಡಿಸಿರುವ ಕಿಚ್ಚನ ಕಾಲ್ಶೀಟ್ಗೆ ಹಲವಾರು ನಿರ್ಮಾಪಕರು ಕಾಯುತ್ತಿದ್ದಾರೆ. ಕಿಚ್ಚ ಈಗಾಗಲೇ ಈಗ, ಬಾಹುಬಲಿ, ಪುಲಿ, ದಬಾಂಗ್-3 ನಂತಹ ಪರಭಾಷೆ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಜನಮನ್ನಣೆ ಪಡೆದುಕೊಂಡಿದ್ದಾರೆ.
ಈಗಾಗಲೇ ಸರ್ಕಾರು ಪಾಟಿ ಪಾಟದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಒಂದು ರೂಪಾಯಿ ನಾಣ್ಯದ ಟ್ಯಾಟೂವನ್ನು ಕತ್ತಿನ ಮೇಲೆ ಹಾಕಿಸಿಕೊಂಡು ಮಹೇಶ್ ಬಾಬು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಾಗಿ ಈ ಚಿತ್ರದಲ್ಲಿ ಸುದೀಪ್ ವಿಲನ್ ಅದರೇ ಒಳ್ಳೆ ಜುಗಲ್ಬಂದಿ ಇರಲಿದೆ ಎಂದು ಚಿತ್ರಪಂಡಿತರು ಮಾತನಾಡುತ್ತಿದ್ದಾರೆ. ಆದರೆ ಸದ್ಯ ಕಿಚ್ಚ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆಗೆ ಸಿದ್ಧವಾಗುತ್ತಿದ್ದಾರೆ. ಜೊತೆಗೆ ಫ್ಯಾಂಟಮ್ ಚಿತ್ರವನ್ನು ಕೈಗೆತ್ತಿಗೊಂಡಿದ್ದಾರೆ. ಇದರ ಮಧ್ಯೆ ಟಾಲಿವುಡ್ಗೆ ಹೋಗುತ್ತಾರಾ ಎಂಬ ಅನುಮಾನ ಮೂಡಿದೆ.
ಇತ್ತೀಚೆಗಷ್ಟೇ ಬಾಲಿವುಡ್ನಲ್ಲಿ ವಿಲನ್ ಆಗಿ ಘರ್ಜಿಸಿದ್ದ ಕಿಚ್ಚ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ಗೆ ಟಕ್ಕರ್ ಕೊಟ್ಟಿದ್ದರು. ದಬಾಂಗ್-3 ಸಿನಿಮಾದಲ್ಲಿ ಬಲ್ಲಿಸಿಂಗ್ ಎಂಬ ಪಾತ್ರದಲ್ಲಿ ಮಿಂಚಿದ್ದರು. ಅಲ್ಲಿ ಸಲ್ಲು ಜೊತೆ ಬೇರ್ ಬಾಡಿಯಲ್ಲಿ ಕಿಚ್ಚನ ಫೈಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಹೀಗಾಗಿ ಕಿಚ್ಚನಿಗೆ ಪರಭಾಷೆಯಿಂದ ಬಹಳ ಆಫರ್ ಗಳು ಬರುತ್ತಿವೆ. ಆದರೆ ಈ ಬಗ್ಗೆ ಕಿಚ್ಚನ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.