ಬೆಂಗಳೂರು, ಜೂ.2- ಲಾಕ್ಡೌನ್ನಿಂದ ಔಷಧ ಪೂರೈಕೆ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಕರ್ನಾಟಕ ಸ್ಟೇಟ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಗೆ ಹತ್ತಾರು ಕೋಟಿ ಮಲ್ಯದ ಔಷಧ ಪೂರೈಸಲಾಗಿದ್ದರೂ ಬಿಲ್ ಕ್ಲಿಯರ್ ಆಗುತ್ತಿಲ್ಲ.
ಇದೀಗ ಬರೀ ಕೋವಿಡ್ಗೆ ಸಂಬಂಧಪಟ್ಟ ಔಷಧಿಗಳಿಗೆ ಮಾತ್ರ ಪೇಮೆಂಟ್ ಆಗುತ್ತಿದ್ದು, ಸೋಂಕಿನ ನೆಪವೊಡ್ಡಿ ಬಾಕಿ ಬಿಲ್ಗಳನ್ನು ಚುಕ್ತಾ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಔಷಧ ಪೂರೈಸಿದ್ದ ಸರಬರಾಜುದಾರರಿಗೆ 40 ದಿನದೊಳಗೆ ಪೇಮೆಂಟ್ ಮಾಡಬೇಕೆಂದು ಟೆಂಡರ್ನಲ್ಲಿ ನಿಯಮವಿದೆ. ಆದರೆ, ಕೆಲ ಅಧಿಕಾರಿಗಳು ಬಾಕಿ ಬಿಲ್ ಪಾವತಿಗೆ ಶೇ.5ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಕೋಟ್ಯಂತರ ರೂ. ಬಂಡವಾಳ ಹೂಡಿ ಔಷಧಿ ಪೂರೈಸಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ. ಅದಷ್ಟು ಬೇಗ ಬಾಕಿ ಬಿಲ್ ಕ್ಲಿಯರ್ ಮಾಡುವಂತೆ ಅಧಿಕಾರಿಗಳನ್ನು ಕೇಳಿದರೆ ಕಮಿಷನ್ ಕೊಟ್ಟರೆ ಮಾತ್ರ ನಿಮ್ಮ ಕೆಲಸ ಆಗುತ್ತದೆ. ಇಲ್ಲದಿದ್ದರೆ ಆಗುವುದಿಲ್ಲ ಎನ್ನುತ್ತಿದ್ದಾರೆ.
ನೆರೆಯ ತಮಿಳುನಾಡಿನಲ್ಲಿ 30 ದಿನದೊಳಗೆ ಪೇಮೆಂಟ್ ಆಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ 6 ತಿಂಗಳು ಕಳೆದರೂ ಪೇಮೆಂಟ್ ಆಗುತ್ತಿಲ್ಲ. ಹೀಗಾಗಿ, ಸರಿಯಾಗಿ ಪೇಮೆಂಟ್ ಆಗದೆ ನಮಗೆ ತೊಂದರೆಯಾಗಿದೆ ಎಂದು ಪೂರೈಕೆದಾರರು ಅಳಲು ತೋಡಿಕೊಂಡಿದ್ದಾರೆ.
ಇಎಂಡಿ, ಭದ್ರತಾ ಠೇವಣಿ ಕೊಡುತ್ತಿಲ್ಲ:
ಟೆಂಡರ್ ಪ್ರಕ್ರಿಯೆ ನಡೆಯುವ ಮುನ್ನ ನಿಯಮದಂತೆ ಇಎಂಡಿ ಹಾಗೂ ಭದ್ರತಾ ಠೇವಣಿ ಪಾವತಿಸಲಾಗುತ್ತದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಇಎಂಡಿ ಹಾಗೂ ಭದ್ರತಾ ಠೇವಣಿ ಮೊತ್ತ ವಾಪಸ್ ಮಾಡಬೇಕು. ಆದರೆ, ಅಧಿಕಾರಿಗಳು ಕುಂಟುನೆಪವೊಡ್ಡಿ ನೀಡುತ್ತಿಲ್ಲ. ಒಂದು ವೇಳೆ ಆ ಮೊತ್ತವನ್ನು ನೀಡುವಂತೆ ಕೇಳಿದರೆ ಅದಕ್ಕೂ ಕಮಿಷನ್ ಕೇಳುತ್ತಿದ್ದಾರೆ ಎಂಬ ದೂರಿದೆ.
ಹೀಗಾಗಿ, ಲಾಕ್ಡೌನ್ನಿಂದ ನಾವು ತೊಂದರೆಗೆ ಸಿಲುಕಿದ್ದು, ಕೂಡಲೇ ಬಾಕಿ ಉಳಿದಿರುವ ಪೇಮೆಂಟ್, ಇಎಂಡಿ ಹಾಗೂ ಭದ್ರತಾ ಠೇವಣಿ ಮೊತ್ತ ಕ್ಲಿಯರ್ ಮಾಡಬೇಕು ಎಂದು ಪೂರೈಕೆದಾರರು ಮನವಿ ಮಾಡಿಕೊಂಡಿದ್ದಾರೆ.
# ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ:
ಕಳಪೆ ಪಿಪಿಇ ಕಿಟ್, ದುಪ್ಪಟ್ಟು ದರಕ್ಕೆ ಸ್ಯಾನಿಟೈಸರ್ ಖರೀದಿ, ಕಪ್ಪುಪಟ್ಟಿಗೆ ಸೇರಿದ ಕಂಪೆನಿಗೆ ಖರೀದಿ ಆದೇಶ ನೀಡಿಕೆ, ಹಳೆಯ ವೆಂಟಿಲೇಟರ್ ಖರೀದಿ, ಕಡಿಮೆ ದರಕ್ಕೆ ಡಯಾಲಿಸಿಸ್ ಯಂತ್ರಗಳ ಮಾರಾಟದಲ್ಲಿ ಅವ್ಯವಹಾರ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಭ್ರಷ್ಟ ಅಧಿಕಾರಿಗಳು ಸಂಸ್ಥೆಯಲ್ಲಿ ತಾವು ಆಡಿದ್ದೇ ಆಟ ಹೂಡಿದ್ದೇ ಲಗ್ಗೆ ಎಂಬಂತೆ ವರ್ತಿಸುತ್ತಿದ್ದಾರೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಟೆಂಡರ್ ಸಂಬಂಧ ತಮಗೆ ಬೇಕಾಗಿರುವವರನ್ನು ಕಚೇರಿಗೆ ಕರೆಸಿಕೊಂಡು ಡೀಲ್ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಮೇಲಾಧಿಕಾರಿಗಳ ಗಮನಕ್ಕೆ ತರದೆ 4ಜಿ ವಿನಾಯಿತಿ ದುರ್ಬಳಕೆ ಮಾಡಿಕೊಂಡು ಖರೀದಿ ಆದೇಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. ಈ ಅವ್ಯವಹಾರದಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಭ್ರಷ್ಟ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಹೆಚ್ಚಾಗಿದೆ.