ಬೆಂಗಳೂರು: ರಾಜ್ಯಗಳಿಗೆ ಆರ್ಥಿಕ ನೆರವು ನೀಡುವಂತೆ 15ನೇ ಪೇ ಕಮೀಷನ್, ನಾಲ್ಕು ಅಂಶಗಳನ್ನು ಆಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ರಾಜ್ಯಗಳಿಗೆ ಯಾವ ರೀತಿ ಹಣ ಸಂದಾಯ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಘೋಷಿಸಿರುವ ವಿಶೇಷ ಪ್ಯಾಕೇಜ್ನಲ್ಲಿ ಕೇಂದ್ರದ ಪಾಲೆಷ್ಟು(?) ಆರೂವರೆ ಲಕ್ಷ ಕೋಟಿಯಲ್ಲಿ ಕೇಂದ್ರದ ಪಾಲು 2,500 ಕೋಟಿ ಮಾತ್ರ. ಕೇಂದ್ರದ 2,500 ಕೋಟಿಯಿಂದ ಯಾವ ಚೇತರಿಕೆ ಸಾಧ್ಯ(?) 40 ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ. ಮೇ 13ರ ಪ್ಯಾಕೇಜ್ ಯಾವುದೇ ನೆರವಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಸದ್ಯ ಕೇಂದ್ರದ್ದು ಕೇವಲ 34 ಲಕ್ಷ ಕೋಟಿ ಬಜೆಟ್. ಆರ್ಥಿಕ ಹೊರೆ ಬೀಳುವುದು ಕೇಂದ್ರ ಸರ್ಕಾರಕ್ಕಲ್ಲ, ಬ್ಯಾಂಕ್ಗಳು, ಹಣಕಾಸಿನ ಸಂಸ್ಥೆಗಳ ಮೇಲೆ, ವ್ಯಾಪಾರಿ, ಕಾರ್ಮಿಕರ ಪಿಎಫ್ಗೆ ಕೇಂದ್ರದ 2,500 ಕೋಟಿ ಬಳಕೆಯಾಗಲಿದೆ. ದಿಸ್ಕಾಂಗಳಿಗೆ 95 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದೆ. ಈ ಹಣವನ್ನು ಕೇಂದ್ರ ಸರ್ಕಾರ ಕೊಡಲ್ಲ, ಈ ಹಣವನ್ನು ರಾಜ್ಯ ಸರ್ಕಾರಗಳೇ ತುಂಬಬೇಕು. ಟಿಸಿಎಸ್ 50 ಸಾವಿರ ಕೋಟಿ ಘೋಷಿಸಿದೆ. ಇದನ್ನೂ ಕೇಂದ್ರ ಸರ್ಕಾರ ನೀಡುವುದಿಲ್ಲ, ರಾಜ್ಯ, ಹಣಕಾಸಿನ ಸಂಸ್ಥೆಗಳೇ ಭರಿಸಬೇಕು. ಇಲ್ಲಿ ಕೇಂದ್ರದ ಪಾಲು ಏನು ಅನ್ನೋದೇ ಗೊತ್ತಾಗ್ತಿಲ್ಲ. ಜನರನ್ನ ಮೂರ್ಖರನ್ನಾಗಿ ಮಾಡುವುದಷ್ಟೇ ಕೇಂದ್ರದ ಉದ್ದೇಶ ಎಂದು ಅವರು ಆರೋಪ ಮಾಡಿದ್ದಾರೆ.
ಇನ್ನು 87.46 ಲಕ್ಷ ಕೋಟಿ 2019ರಲ್ಲಿ ಬ್ಯಾಂಕುಗಳು ನೀಡಿವೆ. ಕೇಂದ್ರ ಘೋಷಿಸಿರುವ ಪ್ಯಾಕೇಜ್ ನಲ್ಲಿ ಇದೂ ಸೇರಿದೆ. ಎಂಎಸ್ಎಂಇಗಳಿಗೆ ಬ್ಯಾಂಕುಗಳು ಸಾಲ ನೀಡುತ್ತವೆ. ೩ ಲಕ್ಷ ಕೋಟಿ ಎಂಎಸ್ಎಂಇಗೆ ಕೇಂದ್ರ ಘೋಷಿಸಿದೆ. ಬ್ಯಾಂಕುಗಳು ಕೊಡುವ ಸಾಲವೇ ಹೊರತು ಕೇಂದ್ರದ ಟ್ರಜರಿಯಿಂದ ಕೊಡುವ ಹಣವಲ್ಲ. ಕೇಂದ್ರದ ಪ್ಯಾಕೇಜ್ನಲ್ಲಿ ಯಾವುದೇ ಹೊಸತನವಿಲ್ಲ, ಉದ್ಯಮಗಳಿಗೆ ಶಕ್ತಿ ತುಂಬುವ ಕೆಲಸವೂ ಆಗ್ತಿಲ್ಲ, ಟಿಡಿಎಸ್ ಕಡಿತ ಅಂತ ಹೇಳ್ತಾರೆ. 2.5 ಹಣ ಪ್ರತಿ ವ್ಯಕ್ತಿಗೆ ಸಿಗಬಹುದು. ಆದರೆ, ಆ ಹಣಕ್ಕೆ ಬಡ್ಡಿ ಸಮೇತ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ನುಡಿದರು.