Home / Uncategorized / ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

 

*ವಡೇರಹಟ್ಟಿ (ಮೂಡಲಗಿ)-* ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷ ವಹಿಸಿರುವ ಸಂಘಟನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಅರಭಾವಿ ಬಿಜೆಪಿ ಮಂಡಲದಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಹಮ್ಮಿಕೊಂಡಿದ್ದ ಮತಗಟ್ಟೆ ಶಕ್ತಿಕೇಂದ್ರ, ಪೇಜ್ ಪ್ರಮುಖರು ಹಾಗೂ ಅಲ್ಪಾವಧಿ ವಿಸ್ತಾರಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಪ್ರೀಲ್ ಕೊನೆಯ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಚುನಾವಣೆ ಜರುಗಲಿದ್ದು ಅದಕ್ಕಾಗಿ ಪಕ್ಷವನ್ನು ವ್ಯವಸ್ಥಿತವಾಗಿ ಸಂಘಟಿಸುವಂತೆ ತಿಳಿಸಿದರು.
ಬಿಜೆಪಿ ಎಲ್ಲ ಪಕ್ಷಗಳಿಗಿಂತ ವಿಭಿನ್ನವಾದ ಪಕ್ಷವಾಗಿದೆ. ಇಲ್ಲಿ ಕಾರ್ಯಕರ್ತರಿಗೆ ಸೂಕ್ತವಾದ ಗೌರವವಿದೆ. ಜೊತೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುವ ಪಕ್ಷವಾಗಿದೆ. ಅದಕ್ಕಾಗಿಯೇ ಬಿಜೆಪಿ ತತ್ವಗಳನ್ನು ಒಪ್ಪಿಕೊಂಡು 2008 ರಲ್ಲಿ ಜೆಡಿಎಸ್‍ನಿಂದ ಬಿಜೆಪಿ ಸೇರ್ಪಡೆಯಾದಾಗ ಪಕ್ಷದ ಹಲವಾರು ನಾಯಕರು ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಅಂದಿನಿಂದ ಇಂದಿನವರೆಗೆ ಪಕ್ಷ ನೀಡಿರುವ ಎಲ್ಲ ಸಂಘಟನಾತ್ಮಕ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದೇವೆ. ಅರಭಾವಿ ಮತಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಪಕ್ಷವನ್ನು ಬಲವಾಗಿ ಸಂಘಟಿಸಿದ್ದೇನೆ ಎಂದು ತಿಳಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದ್ದು, ಮುಂದೆ ನಡೆಯುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾನು ಕೈಗೊಂಡಿರುವ ಅಭಿವೃದ್ಧಿಪರ ಕಾರ್ಯಗಳನ್ನು ಮತದಾರರಿಗೆ ವಿವರಿಸಿ ಬಿಜೆಪಿಗೆ ಮತ ನೀಡುವಂತೆ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಕಳೆದ 2018 ರ ಚುನಾವಣೆಯಲ್ಲಿ ಕೆಲವು ಮುಖಂಡರ ಅಪಪ್ರಚಾರ ಹೊರತಾಗಿಯೂ ಕ್ಷೇತ್ರದ ಜನತೆ ಸುಮಾರು 47 ಸಾವಿರಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ ನೀಡಿತ್ತು. ಆವಾಗಲೇ ನನ್ನನ್ನು ವಿರೋಧಿಸುತ್ತಿದ್ದ ಕೆಲ ಮುಖಂಡರಿಗೆ ನಮ್ಮ ಶಕ್ತಿ ಏನೆಂಬುದು ಅರ್ಥವಾಯಿತು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಅರಭಾವಿ ಮತಕ್ಷೇತ್ರವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಂದನವನ ಮಾಡುವ ಮೂಲಕ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದ್ದಾರೆ. ಜನರೊಂದಿಗೆ ಬೆರೆಯುವ ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿರುವ ಬಾಲಚಂದ್ರ ಜಾರಕಿಹೊಳಿ ಅವರ ದಾಖಲೆಯ ಗೆಲುವಿಗೆ ಕಾರ್ಯಕರ್ತರು ಈಗಿಂದಲೇ ಸನ್ನದ್ಧರಾಗಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ಮುಖಂಡ ಅಡಿವೆಪ್ಪ ಹಾದಿಮನಿ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಬಸವರಾಜ ಹಿಡಕಲ್, ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ, ಪಾಂಡುರಂಗ ಮಹೇಂದ್ರಕರ, ಜಿಲ್ಲಾ ಹಾಗೂ ಮಂಡಲದ ಪದಾಧಿಕಾರಿಗಳು, ಮುಖಂಡರಾದ ವಿಠ್ಠಲ ಗಿಡೋಜಿ, ಬನಪ್ಪ ವಡೇರ, ಗೋಪಾಲ ಕುದರಿ, ಶಿದ್ಲಿಂಗ ಗಿಡೋಜಿ, ರೆಬ್ಬೋಜಿ ಮಳಿವಡೇರ, ರುದ್ರಗೌಡ ಪಾಟೀಲ, ಪರಸಪ್ಪ ಸಾರಾಪೂರ, ರಮೇಶ ಈರಗಾರ, ಗೋಪಾಲ ಬೀರನಗಡ್ಡಿ, ಮಾರುತಿ ಮದ್ರಾಸಿ, ಲಗಮಪ್ಪ ಬೀರನಗಡ್ಡಿ, ಸಂಗಪ್ಪ ಪೂಜೇರಿ, ಶಿವಪ್ಪ ಗಿಡೋಜಿ, ರಾಮಚಂದ್ರ ಡೂಗನವರ, ವಿಷ್ಣು ಜೋಕಾನಟ್ಟಿ, ಖಾನಪ್ಪ ಹೋಳ್ಕರ, ಅರಭಾವಿ ಮಂಡಲದ ಎಲ್ಲ ಬೂತ್ ಮಟ್ಟದ ಪ್ರಮುಖರು, ಅಲ್ಪಾವಧಿ ವಿಸ್ತಾರಕರು, ಶಕ್ತಿ ಕೇಂದ್ರಗಳ ಪ್ರಮುಖರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 


Spread the love

About Laxminews 24x7

Check Also

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Spread the love ರಾಮನಗರ: ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸಭೆಯಲ್ಲಿ “ಸಿಎಂ ಬದಲಾವಣೆ’ ಸುಳಿವು ನೀಡಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ