ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಪದಚ್ಯುತಿ ಸಂಬಂಧ ಮಂಗಳವಾರ ಮಧ್ಯಾಹ್ನ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡಿಸಿದರು.
ಭೋಜನ ವಿರಾಮದ ನಂತರ ಕಲಾಪ ಸೇರುತ್ತಿದ್ದಂತೆ ಪದಚ್ಯುತಿ ವಿಚಾರವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಪ್ರಸ್ತಾಪಿಸಿದರು. ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಿರ್ಣಯ ಮಂಡಿಸುವಂತೆ ಆಹ್ವಾನಿಸಿದರು.
ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ನಿರ್ಣಯ ಮಂಡಿಸುತ್ತಿದ್ದಂತೆಯೇ, ಇದರ ಪರವಾಗಿ ಇರುವ 10 ಸದಸ್ಯರು ಎದ್ದು ನಿಂತರೆ ನಿರ್ಣಯ ಚರ್ಚೆಗೆ ಅಂಗೀಕಾರವಾಗಲಿದೆ ಎಂದು ಸಭಾಪತಿಗಳು ತಿಳಿಸಿದರು.
ಸದನದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಎದ್ದು ನಿಂತು ನಿರ್ಣಯವನ್ನು ಬೆಂಬಲಿಸಿದ ಹಿನ್ನೆಲೆ, ಸಭಾಪತಿಗಳು ಈ ನಿರ್ಣಯ ಚರ್ಚೆಗೆ ಅಂಗೀಕಾರವಾಗಿತ್ತು ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದರು. ಚರ್ಚೆಗೆ ಸೂಕ್ತ ಸಮಯ ನಿಗದಿಪಡಿಸಿ ತಿಳಿಸುವುದಾಗಿ ಸಭಾಪತಿಗಳು ಭರವಸೆ ಇತ್ತರು.
ಪರಿಷತ್ ನಲ್ಲಿ ನಿರ್ಣಯ ಮಂಡನೆಯಾದ ಹಿನ್ನೆಲೆ ಮುಂದಿನ ಐದು ದಿನಗಳ ಒಳಗೆ ಯಾವುದೇ ದಿನ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಬಹುದಾಗಿದೆ.
ಈಗ ನಡೆಯುತ್ತಿರುವ ಅಧಿವೇಶನ ಫೆಬ್ರುವರಿ 5 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದು ಇಲ್ಲವೇ ಮುಂದಿನ ಅಧಿವೇಶನದವರೆಗೂ ಮುಂದೂಡಿ ಕೊಳ್ಳುವ ಅವಕಾಶ ಸಭಾಪತಿಗಳಿಗೆ ಇದೆ.