ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳು ಮತ್ತು ರೈತರ ಹೋರಾಟ ಸಂಸತ್ ನಲ್ಲಿ ಪ್ರತಿಧ್ವನಿಸಿದ್ದು, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಕೃಷಿ ಕಾನೂನು ಮತ್ತು ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ಎಬ್ಬಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಬಜೆಟ್ ಮಂಡನೆಯ ಮರುದಿನವಾದ ಇಂದು ಬೆಳಿಗ್ಗೆ ರಾಜ್ಯಸಭೆಯ ಕಲಾಪ ಆರಂಭಗೊಂಡಿತು. ಆರಂಭದಲ್ಲಿ ವಿರೋಧ ಪಕ್ಷಗಳು ರೈತರ ಪ್ರತಿಭಟನೆಯ ಬಗ್ಗೆ ಚರ್ಚಿಸಲು ನಿಲುವಳಿಯೊಂದನ್ನು ಮಂಡಿಸಿತು. ಆದರೆ ಈ ಬಗ್ಗೆ ನಾಳೆ ಅವಕಾಶ ನೀಡುತ್ತೇನೆ ಎಂದು ಸಭಾಪತಿ ವೆಂಕಯ್ಯನಾಯ್ಡು ತಿಳಿಸಿದರು. ಆದರೆ ಇದನ್ನು ವಿರೋಧಿಸಿ ವಿಪಕ್ಷ ಸದಸ್ಯರು ಘೋಷಣೆ ಕೂಗಿ, ತಕ್ಷಣ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರಪತಿಗಳ ಭಾಷಣದಲ್ಲಿ ರೈತರ ಹೋರಾಟದ ಉಲ್ಲೇಖದ ಕುರಿತು ವಿಪಕ್ಷ ನಾಯಕರು ಪ್ರತಿಭಟನೆ ನಡೆಸಿದರು. ಇನ್ನು ಅತ್ತ ಸಭಾಧ್ಯಕ್ಷರು ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಕೆಲ ಸದಸ್ಯರಂತೂ ಸಭಾಧ್ಯಕ್ಷ ಮಾತಿಗೂ ಜಗ್ಗದೇ ಪ್ರತಿಭಟನೆ ಮುಂದುವರೆಸಿದ ಹಿನ್ನಲೆಯಲ್ಲಿ ವೆಂಕಯ್ಯನಾಯ್ಡು ಅವರು 2 ಬಾರಿ ಸದನವನ್ನು ಮುಂದೂಡಿದರು.
ಗದ್ದಲ, ಕೋಲಾಹಲ ಹೆಚ್ಚಾದಾಗ ಸಭಾಪತಿಯವರು ಕಲಾಪವನ್ನು 10.30ರವರೆಗೆ ಮುಂದೂಡಿದರು. ಬಳಿಕ ಸದನ ಸಮಾವೇಶಗೊಂಡಾಗಲೂ ವಿಪಕ್ಷ ಸದಸ್ಯರು ಅದೇ ಬೇಡಿಕೆಯನ್ನು ಮುಂದಿಟ್ಟು ಗದ್ದಲವೆಬ್ಬಿಸಿದ್ದರಿಂದ ಮತ್ತೆ 11.30ರವರೆಗೆ ಕಲಾಪವನ್ನು ಸಭಾಪತಿ ಮುಂದೂಡಿದರು. ಮತ್ತೆ ಕಲಾಪ ಸೇರಿದಾಗಲೂ ಅದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಕಲಾಪವನ್ನು ನಾಳೆ 9 ಗಂಟೆಗೆ ಮುಂದೂಡಲಾಯಿತು.