ಮೂಡಲಗಿ : ಶತಮಾನೋತ್ಸವ ಆಚರಿಸಿರುವ ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಈ ಭಾಗದಲ್ಲಿ ರೈತರಿಗೆ ಸಿಗಬೇಕಿರುವ ಎಲ್ಲ ಸವಲತ್ತುಗಳನ್ನು ನೀಡುತ್ತ ಬರುತ್ತಿದೆ. ಈ ಹಿಂದೆ 8 ಕೋಟಿ ರೂ.ಗಳಷ್ಟಿದ್ದ ಪತ್ತನ್ನು 15 ಕೋಟಿ ರೂ.ಗಳವರೆಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ಕಲ್ಲೋಳಿ ಪಿಕೆಪಿಎಸ್ಗೆ ಭೇಟಿ ನೀಡಿ ಮಾತನಾಡಿದ ಅವರು, ರೈತರ ಆರ್ಥಿಕ ಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಾಯ ಸೌಲಭ್ಯ ನೀಡುತ್ತಿರುವ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಜೀವನಾಡಿಯಾಗಿ ಕೆಲಸ ಮಾಡುತ್ತಿರುವ ಪಿಕೆಪಿಎಸ್ಗಳು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುತ್ತಿವೆ. ಬಿಡಿಸಿಸಿ ಬ್ಯಾಂಕಿನಿಂದ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗಿದೆ. ಸಂಘದ ಸದಸ್ಯರಿಗೆ ಎಮ್ಮೆ-ಆಕಳು ಸಾಕಾಣಿಕೆಗೆ ಶೇ 3 ರಷ್ಟು ಬಡ್ಡಿದರದಲ್ಲಿ 1 ಲಕ್ಷ ರೂ. ಸಾಲ ನೀಡುವ ಯೋಜನೆಯನ್ನು ಬಿಡಿಸಿಸಿ ಬ್ಯಾಂಕಿನಿಂದ ಹಾಕಿಕೊಳ್ಳಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನೂರು ವರ್ಷ ಆಚರಿಸಿ ಮುನ್ನುಗ್ಗುತ್ತಿರುವ ಕಲ್ಲೋಳಿ ಪಿಕೆಪಿಎಸ್ ಇಷ್ಟರಲ್ಲಿಯೇ 50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದಲಿದೆ ಎಂದು ಹೇಳಿದರು.