ಕುಷ್ಟಗಿ: ರಸ್ತೆ ಬದಿ ನಿಂತ ಲಾರಿಗೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು 12 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಕಲಕೇರಿ ಬಳಿ ನಡೆದಿದೆ.
ಸಣ್ಣ ಪ್ರಮಾಣದ ಮತ್ತು ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬಸ್ ಚಾಲಕನ ವಿರುದ್ಧ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಪನಹಳ್ಳಿ ಘಟಕದ ಈ ಬಸ್ ಹರಿಹರದಿಂದ ಕುಷ್ಟಗಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿತ್ತು. ಗಾಯಗೊಂಡ ಬಹುತೇಕ ಜನರು ಹಿರೇಅರಳಿಹಳ್ಳಿಯ ಕೂಲಿಕಾರ್ಮಿಕರಾಗಿದ್ದು ಆಲಮಟ್ಟಿ ದಾಳಿಂಬೆ ತೋಟದ ಕೆಲಸಕ್ಕೆ ತೆರಳುತ್ತಿದ್ದರು ಎಂದು ತಿಳಿದಿದೆ.