ಚೆನ್ನೈ, ಜ.21- ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ವಿರುದ್ಧ ಹೇಳಿಕೆ ನೀಡಿ ಅವರ ವರ್ಚಸ್ಸಿಗೆ ಧಕ್ಕೆ ತಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದ ದ್ರಾವಿಡರ್ ವಿದುತಲೈ ಕಳಗಂ ಸಂಘಟನೆಯ ಸದಸ್ಯರಿಗೆ ರಜನಿ ತಮ್ಮ ಶೈಲಿಯಲ್ಲೇ ಜವಾಬು ನೀಡಿರುವುದೇ ಅಲ್ಲದೆ ಯಾವ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ರಜನಿ ಅವರು ಸಮಾರಂಭವೊಂದರಲ್ಲಿ 1971ರಲ್ಲಿ ಸಮಾಜ ದಲ್ಲಿನ ಮೌಢ್ಯತೆ ನಿರ್ಮೂಲನೆ ಯನ್ನು ಹೋಗಲಾಡಿಸಲು ಪೆರಿಯಾರ್ ಅವರು ಸಾಕಷ್ಟು ಪರಿಶ್ರಮ ಹಾಕಿದ್ದರು, ಆದರೆ ಆ ಮೆರವಣಿಗೆಯಲ್ಲಿ ಶ್ರೀರಾಮ ಹಾಗೂ ಸೀತಾಮಾತೆಯ ಬೆತ್ತಲೆ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು ಆದರೆ ಆ ಬಗ್ಗೆ ಯಾವ ಮಾಧ್ಯಮದವರೂ ಪ್ರಕಟಿಸಿರಲಿಲ್ಲ ಎಂದು ರಜನಿ ಹೇಳಿದ್ದರು.
ರಜನಿಯ ಈ ಹೇಳಿಕೆಯನ್ನು ಖಂಡಿಸಿ ದ್ರಾವಿಡರ್ ವಿದುತಲೈ ಕಳಗಂ ಸೇರಿದಂತೆ ಹಲವು ಸಂಘಟನೆಗಳು ನಿನ್ನೆ ಸೂಪರ್ಸ್ಟಾರ್ ಮನೆ ಮುಂದೆ ಪ್ರತಿಭಟನೆ ನಡೆಸಿ ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಇಂದು ಅದಕ್ಕೆ ಸ್ಪಷ್ಟನೆ ನೀಡಿರುವ ರಜನಿಕಾಂತ್ ನನ್ನ ಹೇಳಿಕೆ ಸರಿಯಾಗಿಯೇ ಇದೆ ಅಂದು ನಡೆದ ಮೆರವಣಿಗೆಯಲ್ಲಿ ಸೀತಾಮಾತೆ ಹಾಗೂ ಶ್ರೀರಾಮರ ನಗ್ನ ಫೋಟೋವನ್ನು ಮೆರವಣಿಗೆ ಮಾಡಿದ್ದರು, ಸಂಘಟನೆಗಳ ಒತ್ತಡಕ್ಕೆ ಮಣಿದು ನಾನು ಕ್ಷಮೆಯಾಚಿಸಲಾರೆ ನಾನು ಅಂದು ಏನು ನೋಡಿದ್ದೇನೋ ಅದನ್ನು ಮಾತ್ರ ಹೇಳಿದ್ದೇನೆ ಎಂದು ಸೂಪರ್ಸ್ಟಾರ್ ಸ್ಪಷ್ಟಪಡಿಸಿದ್ದಾರೆ.