ಬೆಂಗಳೂರು: ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಬಿಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯದಲ್ಲಿ ಮುಖ್ಯಮಂತ್ರಿಯದೇ ಪರಮಾಧಿಕಾರ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪುನರುಚ್ಚರಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯದಮವರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಅದೇನಿದ್ದರೂ ಕಾಂಗ್ರೆಸ್ನಲ್ಲಿದೆ, ಸದಾ ಗೊಂದಲದಲ್ಲಿ ಆ ಪಕ್ಷ ಮುಳುಗಿರುತ್ತದೆ ಎಂದರು. ‘ವರಿಷ್ಠರ ಒಪ್ಪಿಗೆಯಂತೆ ಮುಂದಿನ ನಡೆ ಎಂದು ಸಿಎಂ ಹೇಳುತ್ತಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ನಿಮ್ಮ (ಮಾಧ್ಯಮದವರು) ಪ್ರಶ್ನೆ ಬದಲಾಗುವ ತನಕ ನನ್ನ ಉತ್ತರದಲ್ಲೂ ಬದಲಾವಣೆಯಾಗದು ಎಂದು ಸಿಂಗ್ ನುಣುಚಿಕೊಂಡರು.
ದೆಹಲಿಯಲ್ಲೇ ಫೈನಲ್: ಕೋರ್ ಕಮಿಟಿ ಸಭೆಯಲ್ಲಿ ವಿಧಾನಪರಿಷತ್, ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳ ಬಗ್ಗೆ ರ್ಚಚಿಸಿ ಶಿಫಾರಸು ಮಾಡಲಾಗಿದೆ. ಅಲ್ಲದೆ, ಚುನಾವಣಾ ಕಾರ್ಯತಂತ್ರ, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆಯೂ ಚರ್ಚೆಯಾಗಿದೆ ಎಂದ ಅರುಣ್ ಸಿಂಗ್, ಕೋರ್ ಕಮಿಟಿ ಶಿಫಾರಸು ಮಾಡಿದರೂ ಪಕ್ಷದ ಕೇಂದ್ರ ಚುನಾವಣೆ ಸಮಿತಿ ನಿರ್ಧಾರವೇ ಅಂತಿಮ ಎನ್ನುವ ಮೂಲಕ ದೆಹಲಿಯಲ್ಲೇ ಫೈನಲ್ ಎಂಬ ಸುಳಿವು ನೀಡಿದರು.
ಈ ಹಿಂದೆ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಮತ್ತು ನೇಮಕಕ್ಕೆ ಕೋರ್ ಕಮಿಟಿ ಶಿಫಾರಸು ಮಾಡಿದ ಪಟ್ಟಿಯನ್ನು ವರಿಷ್ಠರು ಬದಿಗಿಟ್ಟು ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು. ರಾಜ್ಯಸಭೆಗೆ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಆಯ್ಕೆಯಾಗಿದ್ದರು. ಕರೊನಾ ಕಾರಣಕ್ಕೆ ಗಸ್ತಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಾರಾಯಣ ಹೆಸರನ್ನು ವರಿಷ್ಠರು ಅಂತಿಮಗೊಳಿಸಿದ್ದರು. ಪರಿಷತ್ಗೆ ಶಾಂತಾರಾಮ ಬುಡ್ನಿಸಿದ್ಧಿ, ಸಾಬಣ್ಣ ತಳವಾರ, ಪ್ರತಾಪಸಿಂಹ ನಾಯಕ ನೇಮಕ ಕೂಡ ವರಿಷ್ಠರದೇ ಆಗಿತ್ತು. ಇದೀಗ ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೂ ಅಭ್ಯರ್ಥಿ ಗಳ ಪಟ್ಟಿ ದೆಹಲಿಯಲ್ಲೇ ಫೈನಲ್ ಆಗುವುದು ನಿಚ್ಚಳ.
Laxmi News 24×7