ಬೆಳಗಾವಿ :ರಾಜ್ಯದಲ್ಲಿ ಕರೊನಾ ಪ್ರಕರಣ ತಗ್ಗುತ್ತಿರುವ ಕಾರಣಕ್ಕೆ ರಾತ್ರಿ ಕರ್ಫ್ಯೂ ಸೇರಿ ಅನೇಕ ನಿರ್ಬಂಧಗಳನ್ನು ಸಡಿಲಿಸಿರುವ ರಾಜ್ಯ ಸರ್ಕಾರ, ಗಡಿ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರ ಜೀವನವನ್ನು ಮಾತ್ರ ನರಕವನ್ನಾಗಿಸಿದೆ.
ಯಾವುದೇ ರ್ತಾಕ ಆಧಾರವಿಲ್ಲದೆ ಅವೈಜ್ಞಾನಿಕವಾಗಿ ವಿಧಿಸಿರುವ ನಿರ್ಬಂಧಗಳಿಂದ ಆರ್ಟಿಪಿಸಿಆರ್ ಕಡ್ಡಾಯ ಪ್ರಮಾಣ ಪತ್ರವನ್ನೇ ನೆಪವಾಗಿಸಿಕೊಂಡು ವಾಹನ ಸವಾರರಿಂದ ರಾಜಾರೋಷವಾಗಿ ಹಣ ಸುಲಿಗೆ ಮಾಡಲಾಗುತ್ತಿದೆ. ಚೆಕ್ಪೋಸ್ಟ್ ಸಿಬ್ಬಂದಿಗೆ ಲಂಚ ನೀಡುವುದರಿಂದ ತಪ್ಪಿಸಿಕೊಳ್ಳಲು ಅನೇಕರು ನಕಲಿ ಆರ್ಟಿಪಿಸಿಆರ್ ವರದಿಗಳ ಮೊರೆ ಹೋಗಿದ್ದಾರೆ. ಇದರಿಂದ ಕರೊನಾ ನಿರ್ಬಂಧ ಮತ್ತಷ್ಟು ಗೊಂದಲ, ಭ್ರಷ್ಟಾಚಾರ, ಕಿರಿಕಿರಿಗೆ ಎಡೆಮಾಡಿಕೊಟ್ಟಿದೆ.
ವಿಶ್ವಾದ್ಯಂತ ಮಾನ್ಯತೆ ಪಡೆದಿರುವ ಕೋವಿಡ್ ಲಸಿಕೆಗೂ ಮಾನ್ಯತೆ ನೀಡದ ಈ ನಿರ್ಬಂಧಗಳಿಂದ ಅನೇಕ ವಿದ್ಯಾರ್ಥಿಗಳು, ಪ್ರವಾಸಿಗರು, ವ್ಯಾಪಾರಿಗಳು, ಕೂಲಿಕಾರ್ವಿುಕರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ವಿಚಾರ ಗಡಿ ಪ್ರದೇಶಗಳಲ್ಲಿ ಭಾನುವಾರ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್ನಿಂದ ಬಯಲಾಗಿದೆ. 2022ರ ಜನವರಿ ಮೊದಲ ವಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಗಳ ಅನ್ವಯ, ಮಹಾರಾಷ್ಟ್ರ, ಕೇರಳ ಗೋವಾದಿಂದ ಆಗಮಿಸುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ಆರ್ಟಿಪಿಸಿಆರ್ ಪ್ರಮಾಣಪತ್ರ ಹೊಂದಬೇಕು.
ಈ ಆದೇಶ ಹೊರಬಿದ್ದ ದಿನದಿಂದಲೇ ಗಡಿಯಲ್ಲಿ ಗೊಂದಲ ಹಾಗೂ ಭ್ರಷ್ಟಾಚಾರ ಆರಂಭವಾಗಿದೆ. ಆರ್ಟಿಟಿಪಿಸಿಆರ್ ವರದಿ ಹೊಂದಿರಬೇಕೆಂಬ ಅವೈಜ್ಞಾನಿಕ ನಿಯಮದಿಂದಾಗಿ ಚೆಕ್ಪೋಸ್ಟ್ಗಳಲ್ಲಿ ನಿತ್ಯ ಪ್ರಯಾಣಿಕರು ಹಾಗೂ ಪೊಲೀಸರ ವಾಗ್ವಾದ ಸಾಮಾನ್ಯವಾಗಿದೆ.
ನಕಲಿ ದಂಧೆ: ಗಡಿಯಲ್ಲಿ ಚೆಕ್ಪೋಸ್ಟ್ ಸಿಬ್ಬಂದಿ ಆರ್ಟಿಪಿಸಿಆರ್ ವರದಿ ಕೇಳುತ್ತಾರೆ, ವರದಿ ಇಲ್ಲದಿದ್ದರೆ ಲಂಚ ನೀಡಬೇಕಾಗುತ್ತದೆ. ಹೀಗಾಗಿ ಅನೇಕರು ನಕಲಿ ಆರ್ಟಿಪಿಸಿಆರ್ ವರದಿ ಮೊರೆ ಹೋಗುತ್ತಿರುವ ಪ್ರಕರಣ ಮಹಾರಾಷ್ಟ್ರದ ಕೊಗನೊಳ್ಳಿ, ಕೇರಳ ಗಡಿಯಲ್ಲಿರುವ ಮೂಲೆಹೊಳೆ ಚೆಕ್ಪೋಸ್ಟ್ಗಳಲ್ಲಿ ಕಂಡುಬಂದಿದೆ. ಗಡಿಯಲ್ಲಿ ಪ್ರಯಾಣಿಕ ವಾಹನಗಳು ಹೆಚ್ಚಾಗಿ ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಸಂಚರಿಸುತ್ತವೆ