ಬೆಂಗಳೂರು: ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್ ಗಳು ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಮನ್ ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿ ಇಂದು ಆನ್ ಲೈನ್ ಮೂಲಕ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅತ್ಯುತ್ತಮ ಕೋಚ್ ಗಳ ಮೂಲಕ ಕ್ರೀಡಾ ಪಟುಗಳಿಗೆ ತರಬೇತಿ ನೀಡುವುದು ಅತ್ಯಗತ್ಯ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಆವಶ್ಯಕತೆ ಇದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ ಎಂದು ಹೇಳಿದರು.
72 ದೇಶಗಳ ಒಕ್ಕೂಟ ರಚನೆಯಾಗಿ ಹಲವಾರು ವಿಚಾರಗಳ ವಿನಿಮಯಕ್ಕೆ ಕಾಮನ್ವೆಲ್ತ್ ಒಕ್ಕೂಟ ವೇದಿಕೆಯಾಗಿದೆ. ಸಮಾನ ಚಿಂತನೆ ಇರುವ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳಲು, ಅದರಲ್ಲೂ ಯುವಪೀಳಿಗೆಯಲ್ಲಿ ಬಾಂಧವ್ಯ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಕ್ರೀಡಾಕೂಟದ ಬ್ಯಾಟನ್ ಇಂದು 9000 ಕಿ.ಮೀ ಪಯಣಿಸಿ ಭಾರತಕ್ಕೆ ಆಗಮಿಸಿದೆ. ಭಾರತದ ನಾಲ್ಕು ಮಹಾನಗರಗಳಿಗೆ ಬ್ಯಾಟನ್ ಸ್ವೀಕಾರ ಮಾಡುವ ಅವಕಾಶ ದೊರೆತಿದ್ದು, ಈ ಪೈಕಿ ಬೆಂಗಳೂರು ಕೂಡ ಒಂದು ಎನ್ನುವುದು ಸಂತೋಷದ ಸಂಗತಿ ನಮ್ಮ ಜವಾಬ್ದಾರಿಯನ್ನು ಮುಂದುವರೆಸುವ ಸಂಕೇತವಾಗಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.