ರಾಯಚೂರು: ನಗರದ ಟಿಪ್ಪುಸುಲ್ತಾನ್ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ವಾರ್ಡ್ ಸಂಖ್ಯೆ 7 ಹಾಗೂ 8ರ ನಿವಾಸಿಗಳು ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಟಿಪ್ಪುಸುಲ್ತಾನ್ ರಸ್ತೆಯು ನಗರದ ನುಖ್ಯ ರಸ್ತೆಯಾಗಿದ್ದು, ವಿಸ್ತರಣೆ ಕಾರ್ಯ ಆರಂಭಿಸಿ ಒಂದು ವರ್ಷ ಗತಿಸಿದರೂ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದ ಅಂದ್ರೂನ್ ಕಿಲ್ಲಾ ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರ ಸಮಸ್ಯೆಯಾಗಿದೆ. ರಸ್ತೆ ತುಂಬೆಲ್ಲ ಕೊಳಚೆ ನೀರು ಶೇಖರಣೆಯಾಗಿದ್ದು ಸೊಳ್ಳೆಗಳು ಉತ್ಪತ್ತಿ ತಾಣವಾಗಿ ಡೆಂಗಿ, ಮಲೇರಿಯಾ ರೋಗಕ್ಕೆ ಕಾರಣವಾಗುತ್ತಿದೆ ಎಂದರು.
ರಸ್ತೆ ವಿಸ್ತರಣೆ ಕಾರ್ಯದಿಂದ ಸಂಚಾರ ಸ್ಥಗಿತವಾಗಿದ್ದು, ವ್ಯಾಪಾರಸ್ಥರಿಗೆ ತೀವ್ರ ಸಮಸ್ಯೆಯಾಗಿದೆ. ಇಲ್ಲಿನ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ರಸ್ತೆ ಮೂಲಕ ತಹಶಿಲ್ದಾರ್ ಕಚೇರಿ, ಕೇಂದ್ರ ಮುಖ್ಯ ಅಂಚೆ ಕಚೇರಿ, ಶಿಕ್ಷಣ ಇಲಾಖೆ, ನಗರಸಭೆ ಸೇರಿ ಇತರೆ ಸರ್ಕಾರಿ ಕಚೇರಿಗೆ ಹೋಗಬೇಕಾದರೆ ಸಂಚರಿಸಲು ತೀವ್ರ ಸಮಸ್ಯೆಯಾಗಿದೆ. ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಿವಾಸಿ ಮಹಮ್ಮದ್ ಹಸನ್, ಇಮ್ತಿಯಾಜ್, ಸೈಯದ್ ಯೂಸೂಫ್ ಖಾದ್ರಿ, ಆಸೀಫ್, ಜಾವಿದ್ ಖಾನ್, ಮಹಮ್ಮದ್ ಜಾಫರ್ ಹುಸೇನ್, ಮಹಮ್ಮದ್ ಫಯಾಜ್ ಅಹ್ಮದ್, ರೆಹ್ಮಾನ್, ಖಲೀಲ್ ಅಹ್ಮದ್ ಇದ್ದರು.
Laxmi News 24×7