ಬೆಂಗಳೂರು, ಮಾ.23- ಬೆಂಗಳೂರು ಮಹಾನಗರದಲ್ಲಿ ಸಿಇ ಹಾಗೂ ಸಿಇಒ ನಿಂದ ಅನುಮತಿ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳು ಮತ್ತು ಕಟ್ಟಡಗಳ ಮಾಲೀಕರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್ಸಿಂಗ್ ವಿಧಾನ ಪರಿಷತ್ನಲ್ಲಿ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮಹಾನಗರದಲ್ಲಿ ಕಾನ್ಸೆಂಟ್ ಫಾರ್ ಎಸ್ಟಾಬ್ಲಿಷ್ಮೆಂಟ್ ಹಾಗೂ ಕಾನ್ಸೆಂಟ್ ಫಾರ್ ಆಪರೇಷನ್ನಿಂದ ಕಟ್ಟಡಗಳು ಮತ್ತು ಕಾರ್ಖಾನೆಗಳು ಕಡ್ಡಾಯವಾಗಿ ಅನುಮತಿ ಪಡೆದು ಕಾರ್ಯ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ.
ನಗರದಲ್ಲಿ ಒಟ್ಟು 12,714 ಕಾರ್ಖಾನೆಗಳಿವೆ. ಇದರಲ್ಲಿ 114 ಕಾರ್ಖಾನೆಗಳು ನಿಯಮ ಉಲ್ಲಂಘನೆ ಮಾಡಿವೆ. ಇವುಗಳಿಗೆ ಶೋಕಾಸ್ ನೋಟಿಸ್ ಕೊಡಲಾಗಿದೆ ಎಂದು ತಿಳಿಸಿದರು. ಈಗಾಗಲೇ ಕಟ್ಟಡ ಮತ್ತು ಕಾರ್ಖಾನೆ ಮಾಲೀಕರ ಜತೆ ಹಲವಾರು ಬಾರಿ ಮಾತುಕತೆ ನಡೆಸಿದ್ದೇವೆ. ಅನುಮತಿ ಪಡೆಯದೆ ಕಾರ್ಯಾಚರಣೆ ನಡೆಸುತ್ತಿರುವವರ ವಿರುದ್ಧ ಜಲ ಮತ್ತು ವಾಯು ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಶೋಕಾಸ್ ನೋಟಿಸ್ಗೆ ಉತ್ತರ ಕೊಡದಿದ್ದರೆ ಕಾನೂನು ರೀತಿಯೇ ಕ್ರಮ ಜರುಗಿಸುವುದು ಖಚಿತ ಎಂದು ಸಚಿವರು ಪುನರುಚ್ಚರಿಸಿದರು.
ಅಧಿವೇಶನ ಮುಗಿದ ಬಳಿಕ ನಾನೇ ಖುದ್ದು ಭೇಟಿ ನೀಡಿ, ಯಾವ ಯಾವ ಕಡೆ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆಯೋ ಅಂತಹ ಕಡೆ ಕಾನೂನು ಕ್ರಮ ಜರುಗಿಸುತ್ತೇನೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆ ಮಂಡಳಿ ಕಾರ್ಯ ನಿರ್ವಹಿಸುತ್ತದೆ. ಹೊಸದಾಗಿ ಕಟ್ಟಡ ಮತ್ತು ಕಾರ್ಖಾನೆ ಆರಂಭಿಸಬೇಕೆಂದರೆ ಎನ್ಜಿಟಿ ಆದೇಶದ ಪ್ರಕಾರ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದೇ ಇದ್ದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇದಕ್ಕೂ ಮುನ್ನ ಪಿ.ಆರ್.ರಮೇಶ್ ಅವರು ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಕಾರ್ಖಾನೆಗಳು ಮತ್ತು ಕಟ್ಟಡಗಳು ತಲೆ ಎತ್ತುತ್ತಿರುವುದರಿಂದ ನಗರದ ಪರಿಸರದ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಇರುವ ಬೆರಳೆಣಿಕೆಯಷ್ಟು ಕೆರೆಗಳಲ್ಲಿ ಕಸ ತಂದು ಹಾಕುತ್ತಿದ್ದಾರೆ. ಪರಿಣಾಮ ಇಂದು ಅಂತರ್ಜಲದ ಮಟ್ಟ ಕುಸಿಯುತ್ತಿದ್ದು, ಜನರಿಗೆ ಸರಿಯಾದ ಗಾಳಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇವುಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಲು ಸದನ ಸಮಿತಿ ರಚನೆ ಮಾಡಿ ಎಂದು ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ನ ರಮೇಶ್ಗೌಡ, ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟ ಅಧಿಕಾರಿಗಳೇ ತುಂಬಿ ತುಳುಕುತ್ತಿದ್ದಾರೆ. ಲಂಚ ಕೊಟ್ಟರೆ ಯಾರಿಗೆ ಬೇಕಾದರೂ ಅನುಮತಿ ಕೊಡುತ್ತಾರೆ. ಕೈ ಬೆಚ್ಚಗೆ ಮಾಡದಿದ್ದರೆ ಪ್ರತಿಯೊಂದಕ್ಕೂ ಅಡ್ಡಿ ಪಡಿಸುತ್ತಾರೆ. ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.