ಚಿಕ್ಕಮಗಳೂರು: 2020 ಜೀವ ಉಳಿಸುವ ವರ್ಷವಾಗಿದೆ, ಈ ವರ್ಷವನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹೀಗಾಗಿ ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆ ಆರಂಭ ಬೇಡ. ಆನ್ಲೈನ್ ತರಗತಿಗಳನ್ನು ಮುಂದುವರಿಸಲು ಅಭ್ಯಂತರವಿಲ್ಲ ಎಂದು ಅವರು ಸರ್ಕಾಕ್ಕೆ ಸಲಹೆ ನೀಡಿದ್ದಾರೆ. ಈ ಮೂಲಕ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸೇರಿ ದೇಶಾದ್ಯಂತ ಶಿಕ್ಷಕರ ಸಾವು ಸಂಭವಿಸಿದೆ, ಶಿಕ್ಷಕರು ದೇಶದ ಆಸ್ತಿ. ಶಿಕ್ಷಕರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕು. ಶಿಕ್ಷಕರ ರಕ್ಷಣೆ, ಜೀವ ಉಳಿಸಲು ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಅಲ್ಲದೆ ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನು ಖಾಯಿಲೆ ಅಥವಾ ಸಮಸ್ಯೆಗೆ ದೂಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಶಿಕ್ಷಕರ ಬಗ್ಗೆ ಕಾಳಜಿ ವಹಿಸುವಂತೆ ಸಹ ಮನವಿ ಮಾಡಿದ್ದಾರೆ.