ಭುವನೇಶ್ವರ: ಒಡಿಶಾದ ಪ್ಯಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು (444 ಕಿಮೀ) ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ಪನಾಮ ಧ್ವಜ ಹೊತ್ತ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 24 ಮಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. 22 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕಬ್ಬಿಣದ ಅದಿರಿನ ಸರಕುಗಳನ್ನ ತುಂಬಿಕೊಂಡು ಒಡಿಶಾದಿಂದ ಸಿಂಗಾಪುರದ ಕಡೆಗೆ ಹಡಗು ಸಾಗುತ್ತಿತ್ತು. ಹಡಗು ಮುಂದಿನ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ಆ.20 ರಂದು ಪ್ಯಾರದೀಪ್ ಕರಾವಳಿಗೆ ತಲುಪಿತ್ತು. ಇಲ್ಲಿಂದ ಶುಕ್ರವಾರ ಸಂಚಾರ ಆರಂಭಿಸಿತ್ತು.
ಹಡಗು ಸಂಪರ್ಕ ಕಳೆದುಕೊಂಡ ಬಗ್ಗೆ ಕಂಪನಿ ಶನಿವಾರ (ಆ.22) ಬೆಳಿಗ್ಗೆ 11:48ಕ್ಕೆ, ಶ್ರೀ ವಿಜಯ ಪುರಂನಲ್ಲಿರುವ ಐಸಿಜಿಯ ಕಡಲ ರಕ್ಷಣಾ ಸಮನ್ವಯ ಕೇಂದ್ರಕ್ಕೆ (ಎಂಆರ್ಸಿಸಿ) ಮಾಹಿತಿ ರವಾನಿಸಿತ್ತು. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಿತ್ತು
ಮನವಿ ಬಂದ ತಕ್ಷಣ ಎಂಆರ್ಸಿಸಿ ಮುಳುಗಿದ ಹಡಗಿನ ಸಮೀಪದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಂಟಿ ಐಸೊಪೊಸ್ ವಾಣಿಜ್ಯ ಹಡಗಿಗೆ ಮಾಹಿತಿ ನೀಡಿತ್ತು. ಬಳಿಕ ಅಲ್ಲಿಗೆ ತೆರಳಿದ್ದ ಹಡಗು ಲೈಫ್ರಾಫ್ಟ್ನಿಂದ ಇಬ್ಬರನ್ನು ರಕ್ಷಿಸಿತ್ತು. ಈಗ ಇಬ್ಬರು ಸಿಬ್ಬಂದಿಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಉಳಿದ ಸಿಬ್ಬಂದಿಯನ್ನು ಪತ್ತೆಹಚ್ಚಲು ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಶೋಧನೆಗಾಗಿ ಐಸಿಜಿ ಹಡಗುಗಳಾದ ವರದ್ ಮತ್ತು ಅನ್ಮೋಲ್ನ್ನು ನಿಯೋಜಿಸಲಾಗಿದೆ.
ಹಡಗು ಮುಳುಗಲು ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಹಡಗು ಮುಳುಗುವ ಮೊದಲು ಅದರ ಸ್ಥಿತಿ ಮತ್ತು ಕಾಣೆಯಾದ ಸಿಬ್ಬಂದಿ ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ.
Laxmi News 24×7