ಬೆಳಗಾವಿ: ವಿದ್ಯುತ್ ಕೊರತೆ, ಪದೇ ಪದೆ ವಿದ್ಯುತ್ ನಿಲುಗಡೆ ಸೇರಿದಂತೆ ಬೆಳಗಾವಿಯ ಉದ್ಯಮಗಳ ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಮುಕ್ತಿ ನೀಡುವುದಾಗಿ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬೆಳಗಾವಿಯ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಭಾಭವನದಲ್ಲಿ ಕೈಗಾರಿಕೊದ್ಯಮಿಗಳ ಅಹವಾಲು ಆಲಿಸಿ ಅಧಿಕಾರಿಗಳು ಈ ಭರವಸೆ ನೀಡಿದರು.
ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮಾತನಾಡಿ, ವಿದ್ಯುತ್ ಕೈಗಾರಿಕೆಗಳ ಬೆನ್ನೆಲುಬು, ಆದರೆ ಬಹಳಷ್ಟು ಸಮಸ್ಯೆಗಳಿವೆ. ಪ್ರತಿಬಾರಿ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಸಿಬ್ಬಂದಿ ಜೊತೆ ನಡೆಸುವ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಈ ಬಾರಿಯೂ ಅದೇ ಆಗಬಾರದು. ಅಧಿಕಾರಿಗಳು ಸ್ಪಷ್ಟವಾಗಿ ಅಭಿಪ್ರಾಯ ತಿಳಿಸಬೇಕು. ಭರವಸೆ ನೀಡಿದ್ದನ್ನು ಮಾಡಿತೋರಿಸಬೇಕು ಎಂದು ಹೇಳಿದರು.
ಮಚ್ಚೆಯ 230 ಕೆವಿ ಸ್ಚೇಷನ್ ಗೆ ಸಂಬಂಧಿಸಿದಂತೆ ಅಂಡರ್ ಗ್ರೌಂಡ್ ಕೇಬಲ್ ಹಾಕಿದರೆ ಸುಮಾರು 80 ಕೋಟಿ ರೂ. ಖರ್ಚಾಗುತ್ತದೆ. ಅದರ ಬದಲು ಓವರ್ ಹೆಡ್ ಕೇಬಲ್ ಹಾಕುವುದರಿಂದ 70 ಕೋಟಿ ರೂ ಉಳಿಯುತ್ತದೆ. ಉಳಿದ ಹಣವನ್ನು ಮತ್ತಷ್ಟು ಅಭಿವೃದ್ಧಿಗೆ ಬಳಸಬಹುದು. ಎಲ್ಲ ಸ್ಟೇಶನ್ ಗಳು ಓವರ್ ಲೋಡ್ ಆಗಿರುವುದರಿಂದ ನಾವಗೆ ಸ್ಟೇಶನ್ ಟೆಂಡರ್ ಪ್ರೊಸೆಸ್ ಬೇಗ ಮಾಡಬೇಕು. ಹೊಸ ಸ್ಟೇಶನ್ ಗಳನ್ನು ಆದಷ್ಟು ಶೀಘ್ರ ಮಾಡದೇ ಇದ್ದರೆ ದೊಡ್ಡ ಸಮಸ್ಯೆಯಾಗಲಿದೆ. ಬೇಡಿಕೆಗೆ ತಕ್ಕಂತೆ ಸೌಲಭ್ಯಗಳಿಲ್ಲ. ವಿದ್ಯುತ್ ನಿಲುಗಡೆ ದೊಡ್ಡ ಪ್ರಮಾಣದಲ್ಲಿದ್ದು, ಉದ್ಯಮಗಳ ದೊಡ್ಡ ನಷ್ಟ ಅನುಭವಿಸುತ್ತಿವೆ ಎಂದು ಹೇಳಿದರು.
ಹೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಪ್ರವೀಣ ಚಿಕ್ಕಾಡೆ, ಹೆಸ್ಕಾಂ ಸಿಿಬ್ಬಂದಿ ಇರುವ ಸಂಪನ್ಮೂಲದಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಮುಂದಿನ 25 ವರ್ಷಗಳ ಬೇಡಿಕೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಆ ಪ್ರಕಾರ ಯೋಜನೆ ಹಾಕಿಕೊಂಡಿದ್ದೇವೆ. ಎಲ್ಲ ಸ್ಟೇಷನ್ ಗಳನ್ನೂ ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಮೈಕ್ರೋ ಲೆವೆಲ್ ನಲ್ಲಿ ಸಮಸ್ಯೆಗಳನ್ನು ತಿಳಿದುಕೊಂಡು ಕೆಲಸ ಮಾಡುತ್ತಿದ್ದೇವೆ. ಯಾವುದೇ ದೂರನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಎಲ್ಲೂ ಲೋಡ್ ಶೆಡ್ಡಿಂಗ್ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ದಕ್ಷತೆಯಿಂದ, ಉದ್ಯಮ ಸ್ನೇಹಿಯಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೃಷ್ಣಪ್ಪ, ಜೀರೊ ಕಂಪ್ಲೆಂಟ್ ಆಗುವ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ಈ ಗುರಿಯನ್ನು ಸಾಧಿಸುತ್ತೇವೆ. ಬೆಳಗಾವಿಯಲ್ಲಿ ಚೆಂಬರ್ ಆಫ್ ಕಾಮರ್ಸ್ ಮತ್ತು ಉದ್ಯಮಗಳಿಂದ ಎಲ್ಲ ರೀತಿಯ ಸಹಕಾರ ಸಿಗುತ್ತಿದೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಚೆಂಬರ್ ಆಫ್ ಕಾಮರ್ಸ್ ನ ಹೆಸ್ಕಾಂ ಸಮಿತಿ ಚೇರಮನ್ ಆನಂದ ದೇಸಾಯಿ ಮಾತನಾಡಿ, ಗಾಳಿ, ಮಳೆ ಬಂದಾಗ ಹೆಸ್ಕಾಂ ಸಿಬ್ಬಂದಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಳ್ಳುತ್ತಾರೆ ಎನ್ನುವ ಆರೋಪವಿದೆ. ಸಿಬ್ಬಂದಿ ಶ್ರಮಪಟ್ಟು ಕೆಲಸ ಮಾಡುತ್ತಾರೆ ಎನ್ನುವುದು ನಿಜವಾದರೂ ಜನರ ನಿರೀಕ್ಷೆಗೆ ತಕ್ಕಂತೆ ಸರಿಯಾದ ಫಲಿತಾಂಶ ಬರುತ್ತಿಲ್ಲ. ಎಲ್ಲ ಕೈಗಾರಿಕೆ ಮತ್ತು ವ್ಯಾಪಾರೋದ್ಯಮಿಗಳಿಂದ ಸಾಕಷ್ಟು ದೂರು ಬರುತ್ತಿವೆ. ಇದರಿಂದಾಗಿ ಉದ್ಯಮಿಗಳು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು ತಮ್ಮ ಸಮಸ್ಯೆಗಳನ್ನು ಲಿಖಿತರೂಪದಲ್ಲಿ ಸಲ್ಲಿಸಿದರು. ಹೆಸ್ಕಾಂ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದಲ್ಲಿ ವ್ಯಾಪಾರೋದ್ಯಮ ನಡೆಸುವುದೇ ಕಷ್ಟ ಎಂದು ಅಳಲು ತೋಡಿಕೊಂಡರು.
ಎಲ್ಲವನ್ನೂ ಆಲಿಸಿದ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು, ಇರುವ ಸಂಪನ್ಮೂಲದ ಮಿತಿಯಲ್ಲಿ ಉದ್ಯಮ ಸ್ನೇಹಿಯಾಗಿ ಕೆಲಸ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಇನ್ನಷ್ಟು ಉತ್ತಮ ಕೆಲಸ ಮಾಡಲಾಗುವುದು. ಯಾವುದೇ ದೂರು ಬಂದರೂ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಚೆಂಬರ್ ಆಫ್ ಕಾಮರ್ಸ್, ಸಣ್ಣ ಕೈಗಾರಿಕೆಗಳ ಸಂಘ, ಮೈಕ್ರೋ ಇಂಡಸ್ಟ್ರೀಸ್ ಅಸೋಸಿಯೇಷನ್, ಲಘು ಉದ್ಯೋಗ ಭಾರತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಅರವಿಂದ ಗದಗಕರ್, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ದಂಡೆಪ್ಪನವರ್, ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.
Laxmi News 24×7