ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ ಅಲ್ಲ. ಹೈಕಮಾಂಡ್ ಗೊಂದಲ ಪರಿಹಾರ ಮಾಡದೇ ಹೋದ್ರೆ ಪಕ್ಷಕ್ಕೆ ಸಮಸ್ಯೆ ಅಂತ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಎಚ್ಚರಿಕೆ ಕೊಟ್ಟಿದ್ದಾರೆ.
ಬೈ ಎಲೆಕ್ಷನ್ ಫಲಿತಾಂಶ ಬಂದ ಮೇಲೆ ಮತ್ತೆ ನಾಯಕತ್ವದ ಚರ್ಚೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಂತಹವರ ಬಳಿ ಇದನ್ನ ಕೇಳೋದು ಅಲ್ಲ. ಸೂಕ್ತ ವ್ಯಕ್ತಿಗಳ ಬಳಿ ಇದನ್ನ ಕೇಳಬೇಕು. ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ. ಅದಕ್ಕೆ ಅಂತಿಮ ರೂಪ ಹೈಕಮಾಂಡ್ ಕೊಡಬೇಕು. ನಾವು ಯಾರು ಕೊಡೋಕೆ ಆಗಲ್ಲ ಎಂದಿದ್ದಾರೆ.
ಅಂತಿಮವಾಗಿ ನಾವು ಹೈಕಮಾಂಡ್ಗೇ ತಲೆ ಬಾಗಬೇಕು. ನಮಗೆ ಟಿಕೆಟ್ ಕೊಟ್ಟಿರೋದು ಹೈಕಮಾಂಡ್. ನಮ್ಮಲ್ಲಿ ಏನೇ ಆಯ್ಕೆ ಇದ್ದರೂ ಹೈಕಮಾಂಡ್ ಆದೇಶಕ್ಕೆ ನಾವು ತಲೆ ಬಾಗಬೇಕು. ಈ ಗೊಂದಲವನ್ನ ಹೈಕಮಾಂಡ್ ಬಗೆಹರಿಸಬೇಕು. ನಾನು ಕೂಡಾ ಮಾತಾಡಿದ್ದೇನೆ. ಗೊಂದಲ ಬಗೆಹರಿಸದೇ ಹೋದ್ರೆ ಪಕ್ಷದ ಬೆಳವಣಿಗೆಗೆ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಜೊತೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿ ಇದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಯಾರು ಸಂಪರ್ಕದಲ್ಲಿ ಇದ್ದಾರೆಂದು ಯಾರಿಗೆ ಗೊತ್ತು. ನಿಮ್ಮ ಬಳಿ ಏನು ಮಾಹಿತಿ ಇದೆ. ಮೋದಿ, ಕುಮಾರಸ್ವಾಮಿ ಸಂಪರ್ಕದಲ್ಲಿ ಇದ್ದಾರೆ ಅಂತ ನೀವೇ ಹೇಳಿ ಬಿಡೋದು. ಇದೇ ವೇಳೆ ಪಕ್ಷಕ್ಕೆ ಬರೋರಿಗೆ ಓಪನ್ ಆಫರ್ ಕೊಟ್ಟ ವಿಚಾರವಾಗಿ ಕುಮಾರಸ್ವಾಮಿ ಅವರು ಯಾವಾಗಲು ಆಫರ್ ಕೊಡ್ತಾನೆ ಇರುತ್ತಾರೆ. ಅವರ ಪಾರ್ಟಿ ನಡೆಯೋದೇ ಆಫರ್ಗಳ ಮೇಲೆ ಅಂತ ಲೇವಡಿ ಮಾಡಿದ್ದಾರೆ.
Laxmi News 24×7