ಗೋಕಾಕ: ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕಿನ ತಳಕಟ್ಟನಾಳ ಗ್ರಾಮದಲ್ಲಿ ಬುಧವಾರ ವಿವಿಧ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅರಬಾವಿ ಕ್ಷೇತ್ರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಂಡು ಜನೋಪಯೋಗಿ ಕೆಲಸ ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿ ಹದಿಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಉದಗಟ್ಟಿ- ತಳಕಟ್ನಾಳ- ಖಂಡ್ರಟ್ಟಿ ರಸ್ತೆ, ಹಡಗಿನಾಳ ಕ್ರಾಸ್ನಿಂದ ಹಡಗಿನಾಳತನಕ, ಬೀರನಗಡ್ಡಿ ರಸ್ತೆಗಳ ಸುಧಾರಣೆ ಕಾಮಗಾರಿ ಮಂಜೂರಾಗಿದೆ. ರೈತರ ತೋಟಪಟ್ಟಿ ರಸ್ತೆಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, 56 ತೋಟದ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು, ಇನ್ನೂ 50 ತೋಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಅವರು ಕಾಲುವೆಗಳಿಗೆ ಭೇಟಿ ನೀಡುತ್ತ ನಮ್ಮ ರೈತ ಬಾಂಧವರಿಗೆ ನೀರು ತಲುಪಿಸುತ್ತಿದ್ದರು. ಕಾಲುವೆ, ಹಳ್ಳಗಳಿಗೆ ನೀರು ಬಿಡಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದೇನೆ.ಏಪ್ರಿಲ್ 1 ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಿನಾಲ್ ಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ 2.50 ಕೋಟಿ ರೂ. ವೆಚ್ಚದ ಲಕ್ಷ್ಮೀದೇವಿ ನಗಾರೆಖಾನೆ, 60 ಲಕ್ಷ ರೂ. ವೆಚ್ಚದ ಯಾತ್ರಾ ನಿವಾಸ, 10 ಲಕ್ಷ ರೂ. ವೆಚ್ಚದ ದುರ್ಗಾದೇವಿ ಅಡಿಗೆ ಕೋಣೆ, 10 ಲಕ್ಷ ರೂ.ವೆಚ್ಚದ ರೇವಣ ಸಿದ್ಧೇಶ್ವರ ಚಾಂದಣಿ, 10 ಲಕ್ಷ ರೂ. ವೆಚ್ಚದ ಬಲಭೀಮ ದೇವರ ಚಾಂದಣಿ, 10 ಲಕ್ಷ ರೂ.ವೆಚ್ಚದ ಬಸವೇಶ್ವರ ರಂಗ ಮಂದಿರದ ಕಟ್ಟಡ ಹಾಗೂ ಹುಲ್ಲಾರ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಒಟ್ಟು ನಾಲ್ಕು ಕೊಠಡಿ ಉದ್ಘಾಟಿಸಿದರು.
ಸಾನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು, ತಳಕಟ್ಟನಾಳದ ಆತ್ಮಾನಂದ ಸ್ವಾಮೀಜಿ, ಕಪರಟ್ಟಿಯ ಬಸವರಾಜ ಸ್ವಾಮೀಜಿ,ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಪ್ರಭಾ ಶುಗರ್ಸ್ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಲಕ್ಕಪ್ಪ ಹುಲಕುಂದ, ಮಲ್ಲಿಕಾರ್ಜುನ ಕಬ್ಬೂರ, ಬಿಇಓ ಪ್ರಕಾಶ ಹಿರೇಮಠ, ವಿಠ್ಠಲ ಸವದತ್ತಿ, ಅಶೋಕ ನಾಯಿಕ ಇತರರಿದ್ದರು.
Laxmi News 24×7