ಧಾರವಾಡ: ಇಲ್ಲಿನ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರನ್ನ ಕೊಲೆ ಮಾಡಿ ಮೃತದೇಹ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಕಾರು ರಾಮಾಪುರದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಮಧ್ಯೆ ನಿನ್ನೆಯಿಂದ ರಾಜು ಬೋಳಶೆಟ್ಟಿ ಅವರು ನಾಪತ್ತೆಯಾಗಿರುವುದರಿಂದ ಕಿಡಿಗೇಡಿಗಳು ರಾಜು ಬೋಳಶೆಟ್ಟಿ ಅವರನ್ನ ಕೊಲೆಗೈದು, ಕಾರಿನಲ್ಲಿ ಹಾಕಿ ಸುಟ್ಟುಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕಾರಿನಲ್ಲಿದ್ದ ಶವ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೇರೆಡೆ ಕೊಲೆ ಮಾಡಿ, ರೈಲ್ವೆ ಹಳಿ ಬಳಿ ತಂದು ಪೆಟ್ರೋಲ್ ಸುರಿದು ಶವ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಎಸ್ಪಿ ಗುಂಜನ್ ಆರ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಾಜಿ ಶಾಸಕರ ಪುತ್ರ ಕೊಲೆ ಶಂಕೆ
ಕಾರಿನಲ್ಲಿರುವ ಶವ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಹಿನ್ನೆಲೆ ಮೃತದೇಹ ಯಾರದ್ದು ಅನ್ನೋ ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ. ಬೆರಳಚ್ಚು ತಂತ್ರಜ್ಞರ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದು, ಪೊಲೀಸರು ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಂಪೂರ್ಣ ವರದಿ ಬಳಿಕವೇ ಪೊಲೀಸರು ಖಚಿತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಪ್ರಗತಿಪರ ರೈತನಾಗಿದ್ದ ರಾಜು ಬೋಳಶೆಟ್ಟಿ
ಸದ್ಯ ಕೊಲೆಯಾಗಿದ್ದಾರೆ ಎನ್ನಲಾಗುತ್ತಿರುವ ರಾಜು ಬೋಳಶೆಟ್ಟಿ ಅವರು ರಾಜಕೀಯದಲ್ಲಿ ಇರದೇ ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದರು. ಗ್ರಾಮದಲ್ಲಿ ಯಾರೊಂದಿಗೂ ವೈಷ್ಯಮವಿರಲಿಲ್ಲ. ಎಲ್ಲರೊಂದಿಗೆ ಆತ್ಮಿಯವಾಗಿದ್ದರು, ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಈ ಶವ ಅವರದ್ದಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆದ್ರೆ ಕಾರು ಮಾತ್ರ ರಾಜು ಅವರದ್ದೇ ಎಂದು ರಾಜು ಸ್ನೇಹಿತ ಶ್ರೀಧರ್ ಹೇಳಿಕೆ ನೀಡಿದ್ದಾರೆ.
Laxmi News 24×7