ಬೆಳಗಾವಿ: ದೇಶದ ವಿವಿಧೆಡೆ ನಡೆದ ಸೈಬರ್ ವಂಚನೆ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ 1,400 ಬ್ಯಾಂಕ್ ಖಾತೆಗಳು ಕೆಲಸ ಮಾಡಿರುವ ಬಗ್ಗೆ ಸಂಶಯವಿದ್ದು, ಈ ಸಂಬಂಧಿತ ತನಿಖೆಯ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 8 ಜನ ಆರೋಪಿಗಳ 24 ಮ್ಯೂಲ್ ಅಕೌಂಟ್ಗಳಿಂದ 1,02,66,928ರೂ. ವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
ನಗರದ ಸಿಸಿಪಿಎಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಪ್ಪಾಣಿಯ ಶುಭಂ ಲಕ್ಕನ್ನವರ, ಅಮಿತ ಶಿಂಧೆ, ರಾಹುಲ ಹಂಚನಾಳೆ, ಅಕ್ಷಯ ಪಸರೆ, ಗಜಾನನ ಧರ್ಮೋಡೆ ಹೆಸರಿನಲ್ಲಿದ್ದ ಖಾತೆಗಳಿಗೆ ಬೇರೆ ರಾಜ್ಯಗಳಲ್ಲಿ ನಡೆದ 14 ಪ್ರಕರಣಗಳ 46,12,551ರೂ. ಹಣ ಜಮೆಯಾಗಿದೆ. ಇವರು ಬೇರೆಯವರು ಖಾತೆ ಮಾಹಿತಿ ಕೊಟ್ಟಿದ್ದು ಒಪ್ಪಿದ್ದಾರೆ. ರಾಮದುರ್ಗ ತಾಲೂಕಿನ ಸುರೇಬಾನ ಮನಿಹಾಳ ಗ್ರಾಮದ ಅಷ್ಪಾಕ್ ಸುರಕೋಡ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಸೈಬರ್ ವಂಚಕರಿಗೆ ನೀಡಿದ್ದು ಈತನ 4 ಖಾತೆಗಳ ಮೇಲೆ ದೇಶಾದ್ಯಂತ 8 ಪ್ರಕರಣ ದಾಖಲಾಗಿವೆ. ಮೂರು ಖಾತೆಗಳಿಗೆ 14,31,301ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ ಸಿದ್ದು ಡಾಂಗ ಮತ್ತು ಕುಲದೀಪ ಬ್ಯಾಳೆ, ತಮ್ಮ ಪರಿಚಯದ ಜನರಿಗೆ ವಿವಿಧ ಕಾರಣ ಹೇಳಿ ಅವರ ಹೆಸರಿನಿಂದ ಬ್ಯಾಂಕ್ ಖಾತೆಗಳನ್ನು ಮಾಡಿಸಿ ಪಾಸ್ಬುಕ್, ಎಟಿಎಂ ಜತೆಗೆ ಸಿಮ್ ಕಾರ್ಡ್ ಸಹ ಪಡೆದುಕೊಂಡು ಸೈಬರ್ ಅಪರಾಧಿಗಳಿಗೆ ಸಹಕಾರ ನೀಡಿದ್ದಾರೆ. 15 ಖಾತೆಗಳಿಗೆ 42,13,076ರೂ. ವರ್ಗಾವಣೆಯಾಗಿದೆ. ದೇಶದ ಬೇರೆ ಬೇರೆ ಕಡೆ 68 ಪ್ರಕರಣಗಳಲ್ಲಿ (ಎನ್ಸಿಆರ್ಪಿ) ಇವರದ್ದೆ ಖಾತೆಗಳ ಪ್ರಸ್ತಾವಿದೆ. ಇಬ್ಬರನ್ನೂ ಬಂಧಿಸಿ, ಮನೆ ಶೋಧ ಮಾಡಲಾಗಿದೆ. ಇನ್ನೂ ಹಲವರಿಂದ ಖಾತೆ ಮಾಡಿಸಿಕೊಂಡು ವಂಚಿಸಿರುವ ಬಗ್ಗೆ ತನಿಖೆ ಮುಂದುವರೆದಿದೆ ಎಂದರು.
ಸಿಸಿಪಿಎಸ್ ಡಿವೈಎಸ್ಪಿ ವಿರೇಶ ದೊಡ್ಡಮನಿ, ಪಿಐ ಸುನೀಲಕುಮಾರ ನಂದೇಶ್ವರ, ಪಿಎಸ್ಐ ಆನಂದ ಕ್ಯಾರಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
Laxmi News 24×7