ಬೆಳಗಾವಿ: ಜಿಲ್ಲೆಯ ಖಾನಾಪುರ, ಕಿತ್ತೂರ ಮತ್ತು ಬೈಲಹೊಂಗಲ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಕೆಲವು ಖಾಸಗಿ ವ್ಯಾಪಾರಿಗಳು ನಿಯಮಬಾಹಿರವಾಗಿ ಹಸಿ ಮೆಣಸಿನಕಾಯಿ ಖರೀದಿ ವ್ಯಾಪಾರ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಆಗ್ರಹಿಸಿದೆ.
ಈ ಸಂಬಂಧ ಮಹಾಸಂಘದಿಂದ ಜಿಲ್ಲಾಧಿಕಾರಿ, ಎಪಿಎಂಸಿ ಕಾರ್ಯದರ್ಶಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಮೂರು ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿ ಮೆಣಸಿನಕಾಯಿ ಬೆಳೆಯ್ತುತಾರೆ. ಮೊದಲು ರೈತರು ನೇರವಾಗಿ ಬೆಳಗಾವಿಯ ಮಾರುಕಟ್ಟೆಗೆ ತಂದು ಕೊಡುತ್ತಿದ್ದಾಗ, ಸ್ಪರ್ಧಾತ್ಮಕ ಬೆಲೆ ಸಿಗುತ್ತಿತ್ತು. ಈಚೆಗೆ ಬೇರೆ ರಾಜ್ಯದ ಹಾಗೂ ಬೇರೆ ಜಿಲ್ಲೆಯ ಖಾಸಗಿ ವ್ಯಾಪಾರಿಗಳು ಗ್ರಾಮಗಳಿಗೆ ತೆರಳಿ, ಅಲ್ಲಿಯೇ ತೂಕದ ಯಂತ್ರ ಅಳವಡಿಸಿ ಖರೀದಿ ಮಾಡುತ್ತಿದ್ದು, ಕೆಲವು ಕಡೆ ಈ ಹಿಂದೆ ಬಾಕಿ ಹಣ ಕೊಡದೇ ಕೆಲವು ವ್ಯಾಪಾರಿಗಳು ಪರಾರಿಯಾದ ಪ್ರಕರಣಗಳು ನಡೆದಿವೆ. ಒಬ್ಬೊಬ್ಬ ವ್ಯಾಪಾರಿ ಒಂದೊಂದು ಹಳ್ಳಿಗೆ ಹೋಗಿ ಖರೀದಿ ಮಾಡುವುದರಿಂದ ಅವರು ಹೇಳಿದ್ದೆ ಬೆಲೆ ಸಿಗುತ್ತಿದ್ದು, ಯಾವುದೇ ಸ್ಪರ್ಧಾತ್ಮಕ ಬೆಲೆಯೂ ಸಿಗುತ್ತಿಲ್ಲ. ಅದರಲ್ಲೂ ತೀರಾ ಕಡಿಮೆ ದರ ನಿಗದಿ ಮಾಡಿಯೂ ರೈತರಿಗೆ ಮೋಸ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಭೀರಪ್ಪ ದೇಶನೂರ, ಶಿವಪ್ಪ ಸೊಗಲದ, ಮಾರುತಿ ಬಂಡಿವಡ್ಡರ, ಜಗನ್ನಾಥ ಹಂಚಿನಮನಿ, ಬಸವರಾಜ ಪಾಟೀಲ, ದುಂಡಪ್ಪ ತೋಟಗಿ, ಇತರರಿದ್ದರು.
Laxmi News 24×7