Breaking News

ನಿಯಮ ಪಾಲಿಸದಿದ್ರೆ ದೇಶ ಬಿಟ್ಟು ತೊಲಗಿ – ವಾಟ್ಸಪ್‌ಗೆ ಸುಪ್ರೀಂ ವಾರ್ನಿಂಗ್‌

Spread the love

ನವದೆಹಲಿ: ʻದೇಶದ ನಿಯಮಗಳನ್ನ ಪಾಲಿಸಲು ಸಾಧ್ಯವಾಗದಿದ್ರೆ, ದೇಶ ಬಿಟ್ಟು ತೊಲಗಿ ಎಂದು ವಾಟ್ಸಪ್‌ ಒಡೆತನದ ಮೆಟಾ  ಸಂಸ್ಥೆಗೆ ಸುಪ್ರೀಂ ಕೋರ್ಟ್‌  ಖಡಕ್‌ ಎಚ್ಚರಿಕೆ ನೀಡಿದೆ. ಗೌಪ್ಯತೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆ ಕೋರ್ಟ್‌ ಈ ಎಚ್ಚರಿಕೆ ನೀಡಿದೆ.

ಮೆಟಾ ಒಡೆತದ ವಾಟ್ಸಪ್‌  ಇಂದು ವಿಶ್ವದ ಜನಪ್ರಿಯ ಮೆಸೆಂಜರ್‌ ಅಪ್ಲಿಕೇಶನ್‌ ಆಗಿದೆ. ಇಂಟರ್ನೆಟ್‌ ಇದ್ದರೆ ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಫೋಟೋ, ವಿಡಿಯೋ ಧ್ವನಿ ಸಂದೇಶ, ಲೈವ್‌ ಲೊಕೇಷನ್‌ಗಳನ್ನ ಹಂಚಿಕೊಳ್ಳುವ ಸಾಧನವಾಗಿದೆ. ಆದ್ರೆ ಮೆಟಾ ಸಂಸ್ಥೆಯು ಉದ್ದೇಶಿತ ಜಾಹೀರಾತಿಗಾಗಿ ಬಳಕೆದಾರರ ಖಾಸಗಿ ಡೇಟಾವನ್ನ ಹಂಚಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಸುಪ್ರೀಂ ಕೋರ್ಟ್‌ ದೇಶ ತೊರೆಯುವಂತೆ ಎಚ್ಚರಿಕೆ ಕೊಟ್ಟಿದೆ.

ʻವಾಟ್ಸಪ್‌ನ 2021 ರ ಗೌಪ್ಯತೆ ನೀತಿʼಗೆ ಸಂಬಂಧಿಸಿದ ಅರ್ಜಿಯನ್ನ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು, OTT ಸಂದೇಶ ಪ್ಲಾಟ್‌ಫಾರ್ಮ್‌ನಲ್ಲಿ ಗೌಪ್ಯತೆ ದುರುಪಯೋಗಕ್ಕಾಗಿ ಭಾರತದ ಸ್ಪರ್ಧಾ ಆಯೋಗವು ವಿಧಿಸಿದ್ದ 213 ಕೋಟಿ ರೂ. ದಂಡವನ್ನ ಎತ್ತಿಹಿಡಿದಿದೆ.

ಮುಂದುವರಿದು.. ಬಹುರಾಷ್ಟ್ರೀಯ ಕಂಪನಿಯ ವ್ಯವಹಾರ ಹಿತಾಸಕ್ತಿಗಳಿಗಾಗಿ ನಾಗರಿಕರ ಗೌಪ್ಯತೆಯ ಹಕ್ಕನ್ನು ರಾಜೀ ಮಾಡಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದೆ. ಪೀಠವು ಫೆಬ್ರವರಿ 10 ರಂದು ಈ ವಿಷಯದ ಕುರಿತು ವಿವರವಾದ ಆದೇಶಗಳನ್ನು ನೀಡುವುದಾಗಿ ಹೇಳಿದೆ.

ಕೋರ್ಟ್‌ ಹೇಳಿದ್ದೇನು?
ಮೆಟಾ ಸಂಸ್ಥೆಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕೋರ್ಟ್‌, ಬಹುರಾಷ್ಟ್ರೀಯ ಕಂಪನಿಯೊಂದರ ವ್ಯವಹಾರ ಹಿತಾಸಕ್ತಿಗಾಗಿ ನಾಗರಿಕರ ಗೌಪ್ಯತೆಯನ್ನ ರಾಜೀ ಮಾಡಿಕೊಳ್ಳಲು ಅನುಮತಿಸುವುದಿಲ್ಲ. ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳದಿದ್ದರೆ ಅಂತಹ ಡೇಟಾ ಹಂಚಿಕೆಯನ್ನ ನಿಷೇಧಿಸಬಹುದು ಎಂದು ಹೇಳಿದೆ.

ನಮ್ಮ ದೇಶದ ಗೌಪ್ಯತೆಯ ಜೊತೆ ನೀವು ಆಟವಾಡಲು ಸಾಧ್ಯವಿಲ್ಲ. ನಮ್ಮ ಡೇಟಾದ (Data) ಒಂದೇ ಒಂದು ಅಂಕಿ-ಅಂಶವನ್ನೂ ಹಂಚಿಕೊಳ್ಳಲು ನಾವು ನಿಮಗೆ ಅವಕಾಶ ಕೊಡೋದಿಲ್ಲ. ದೇಶದ ಕಾನೂನುಗಳನ್ನ ಪಾಲಿಸಲು ವಿಫಲವಾದ್ರೆ ಕಂಪನಿ ಭಾರತವನ್ನ ತೊರೆಯಬಹುದು ಎಂದು ಎಚ್ಚರಿಕೆ ನೀಡಿದೆ.

ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾಣಿಜ್ಯ ಉದ್ದೇಶಕ್ಕಾಗಿ ಬಳಕೆದಾರರ ಡೇಟಾವನ್ನ ಹಂಚಿಕೊಳ್ಳುವ ಶೋಷಣಾ” ನೀತಿಯನ್ನು ಟೀಕಿಸಿದರು. ಬಳಿಕ ಮುಖ್ಯ ನ್ಯಾಯಾಧೀಶರು, ನಮ್ಮ ಸಂವಿಧಾನ ಅನುಸರಿಸಲು ಸಾಧ್ಯವಾಗದಿದ್ದರೆ, ಭಾರತ ತೊರೆಯಿರಿ. ನಾಗರಿಕರ ಗೌಪ್ಯತೆಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಮೆಟಾ ಮತ್ತು ವಾಟ್ಸಾಪ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ಹಿರಿಯ ವಕೀಲ ಅಖಿಲ್ ಸಿಬಲ್ ವಾದ ಮಂಡಿಸಿದರು. ಎಲ್ಲಾ ಸಂದೇಶಗಳು ‘ಎಂಡ್-ಟು-ಎಂಡ್ ಎನ್‌ಕ್ರಿಪ್ಟ್’ ಆಗಿವೆ, ಕಂಪನಿಗಳೂ ಸಹ ವಿಷಯವನ್ನ ನೋಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರತಿವಾದಿಸಿದರು.

ವಾದ ಪ್ರತಿವಾದಗಳನ್ನು ಆಲಿಸಿದ ಪೀಠವು ಫೆಬ್ರವರಿ 10 ರಂದು ಈ ವಿಷಯದ ಕುರಿತು ವಿವರವಾದ ಆದೇಶಗಳನ್ನು ನೀಡುವುದಾಗಿ ಹೇಳಿತು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ