ಬೆಂಗಳೂರು : ನಗರದ ವಿವಿಧ ಎಟಿಎಂಗಳಿಗೆ ಹಣ ಹಾಕುವ ಸಿಎಂಎಸ್ ಎಜೆನ್ಸಿಯ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ ಮಾಡಿದ ಪ್ರಕರಣ ಸಂಬಂಧ ಆರೋಪಿಗಳ ಜಾಡು ಪತ್ತೆ ಹಚ್ಚಿ ಹೆಡೆಮುರಿಕಟ್ಟಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಬುಧವಾರ (ನ.19) ಹಾಡಹಾಗಲೇ ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ವಾಹನ ಅಡ್ಡಗಟ್ಟಿ ಮಹಾದರೋಡೆ ಮಾಡಿರುವ ಆರೋಪಿಗಳನ್ನು ಬಂಧಿಸಲು ಇಬ್ಬರು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಸಿಸಿಟಿವಿ, ಟವರ್ ಡಂಪ್ ಸೇರಿದಂತೆ ಇನ್ನಿತರ ತಾಂತ್ರಿಕ ಸಾಕ್ಷ್ಯಾಧಾರ ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ಹಳೆ ಮದ್ರಾಸ್ ರಸ್ತೆ ಮೂಲಕ ಆಂಧ್ರಕ್ಕೆ ತೆರಳಿರುವುದನ್ನು ಕಂಡುಕೊಂಡಿದ್ದಾರೆ. ಮತ್ತೊಂದೆಡೆ ಚಾಲಕ, ಇಬ್ಬರು ಗನ್ ಮ್ಯಾನ್ಗಳು ಹಾಗೂ ಓರ್ವ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಚುರುಕುಗೊಳಿಸಿದ್ದಾರೆ.
ಹಣ ತುಂಬಿಸಿಕೊಂಡ ಅರ್ಧಗಂಟೆಯಲ್ಲಿ ದರೋಡೆ: ಜೆ. ಪಿ. ನಗರದ ಸಾರಕ್ಕಿ ಮುಖ್ಯರಸ್ತೆಯಲ್ಲಿರುವ ಹೆಚ್ಡಿಎಫ್ಸಿ ಬ್ಯಾಂಕ್ ಕರೆನ್ಸಿ ಕೇಂದ್ರದಿಂದ 7.11 ಕೋಟಿ ಹಣ ತುಂಬಿಸಿಕೊಂಡು ನಗರದ ವಿವಿಧ ಎಟಿಎಂಗಳಿಗೆ ಹಾಕಲು ನಿನ್ನೆ ಬೆಳಗ್ಗೆ 11.54ಕ್ಕೆ ಬಂದಿದ್ದ ಜೆನ್ ವ್ಯಾಗನ್ ವಾಹನವನ್ನು ಮಧ್ಯಾಹ್ನ 12.21ರ ಸುಮಾರಿಗೆ ಅಶೋಕ್ ಪಿಲ್ಲರ್ ಬಳಿ ದರೋಡೆಕೋರರು ತಡೆದಿದ್ದರು. 12.36ಕ್ಕೆ ಡೇರಿ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ನಿಲ್ಲಿಸಿ ಹಣ ದೋಚಿ ಪರಾರಿಯಾಗಿದ್ದರು. ಹಣ ತುಂಬಿಸಿಕೊಂಡು ಬ್ಯಾಂಕ್ನಿಂದ ಹೊರಟಿದ್ದ ವಾಹನ ಕಣ್ಣಳತೆ ದೂರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸಿಎಂಎಸ್ ಎಜೆನ್ಸಿ ಮ್ಯಾನೇಜರ್ ವಿನೋದ್ ಚಂದ್ರಾದರ್ ಅವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಿಂಬದಿಯಿಂದ ಇನೋವಾ ಕಾರು ಹಿಂಬಾಲಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬ್ಯಾಂಕ್ನಿಂದಲೇ ಹೊರಟಿದ್ದ ವಾಹನವನ್ನು ಬೈಕ್ ಮೂಲಕ ದುಷ್ಕರ್ಮಿಗಳು ಫಾಲೋ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಣದ ವಾಹನದ ಹಿಂದೆ ಓಡಾಡಿದ ದ್ವಿಚಕ್ರವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ಧಾರೆ.
ಆರೋಪಿಗಳು ಬಳಸಿರುವ ಇನೋವಾ ಕಾರಿನಲ್ಲಿ ನಕಲಿ ನೋಂದಣಿ ಫಲಕ ಅಳವಡಿಸಿ ಪೊಲೀಸರ ದಿಕ್ಕುತಪ್ಪಿಸುವ ಕೆಲಸವನ್ನು ಮಾಡಿದ್ದರು. ಕೆಎ03ಎನ್ಸಿ 8052 ಸಂಖ್ಯೆ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಇಂದಿರಾನಗರದ ನಿವಾಸಿ ಗಂಗಾಧರ್ ಎಂಬುವರಿಗೆ ಸೇರಿರುವುದು ಗೊತ್ತಾಗಿತ್ತು. ದರೋಡೆಗೆ ತಮ್ಮ ಸ್ವಿಫ್ಟ್ ಕಾರಿನ ನೋಂದಣಿ ಸಂಖ್ಯೆ ಬಳಸಿರುವುದನ್ನ ಕಂಡು ಗಂಗಾಧರ್ ಆತಂಕ ವ್ಯಕ್ತಪಡಿಸಿದ್ದಾರೆ.
Laxmi News 24×7