ಬಳ್ಳಾರಿ: ರಾಜ್ಯಾದ್ಯಂತ ನಿನ್ನೆಯವರೆಗೆ(ಶನಿವಾರ) ಸಮೀಕ್ಷೆ ನಡೆಸಲು ಆದೇಶವಿತ್ತು. ಗಣತಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಬಳ್ಳಾರಿಯಲ್ಲಿ ಇನ್ನೆರಡು ದಿನ ಗಣತಿ ಮಾಡುವಂತೆ ಆದೇಶ ನೀಡಲಾಗಿದೆ. ಆದರೆ, ಹಬ್ಬದ ರಜಾ ದಿನದಲ್ಲಿಯೂ ಗಣತಿ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಕರು, ತಾಲೂಕು ಪಂಚಾಯತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ದೀಪಾವಳಿ ರಜೆ ಇದೆ, ಯಾರ ಮನೆಗೆ ಹೋದ್ರೂ ಹಬ್ಬದ ದಿನ ಏಕೆ ಬಂದಿದ್ದೀರಿ ಎಂದು ನಮಗೇ ಬೈಯುತ್ತಾರೆ. ಹೀಗಾಗಿ, ನಮ್ಮಿಂದ ಗಣತಿ ಮಾಡೋಕೆ ಸಾಧ್ಯವಿಲ್ಲ ಎಂದು ಶಿಕ್ಷಕರೂ ಸೇರಿದಂತೆ ಇತರೆ ಸಿಬ್ಬಂದಿ ಪ್ರತಿಭಟಿಸಿದರು. ಈ ವೇಳೆ, ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೈರ್ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಸಿಇಒ ಮತ್ತು ಶಿಕ್ಷಕರ ಮಧ್ಯೆ ಒಂದಷ್ಟು ವಾಗ್ವಾದ ನಡೆದು, ಬಳ್ಳಾರಿ ತಾಲೂಕು ಪಂಚಾಯತಿ ಕಚೇರಿಯ ಮುಂದೆ ಹೈಡ್ರಾಮವೇ ನಡೆಯಿತು.
ಪ್ರತಿಭಟನೆ ವೇಳೆ ಶಿಕ್ಷಕಿಯೊಬ್ಬರು ತಲೆ ತಿರುಗಿ ಬಿದ್ದಿದ್ದು ಕೂಡಲೇ ಇತರ ಶಿಕ್ಷಕರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಇಂದು ಸಿಎಂ ನೇತೃತ್ವದಲ್ಲಿ ಸಭೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯನ್ನು ಹೊರತುಪಡಿಸಿ, ರಾಜ್ಯಾದ್ಯಂತ ಶನಿವಾರದ ವೇಳೆಗೆ ಶೇ.96.35ರಷ್ಟು ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ. ಜಿಬಿಎ ವ್ಯಾಪ್ತಿಯಲ್ಲಿ ಕೇವಲ ಶೇ.39.76 ಮಾತ್ರ ಪ್ರಗತಿ ಕಂಡಿದೆ. ಇಂದು (ಭಾನುವಾರ) ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಜಿಜಿಎ ಹೊರತುಪಡಿಸಿ ರಾಜ್ಯದಲ್ಲಿ ಶೇ.87.32 ಜನರ ಸಮೀಕ್ಷೆ ನಡೆದಿದ್ದು, ಭಾನುವಾರವೂ ಸಮೀಕ್ಷೆಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ಅ.18ರ ವರೆಗೆ ಸಮೀಕ್ಷೆ ಪೂರ್ಣಗೊಳಿಸಲು ಸಿಎಂ ಗಡುವು ನೀಡಿದ್ದರು. ಆದರೆ, ಜಿಜಿಎಯಲ್ಲಿ ಪ್ರಗತಿ ನಿರಾಶಾದಾಯಕವಾಗಿದೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿ ಸಮೀಕ್ಷೆ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ಸಮೀಕ್ಷೆಯನ್ನು ಮುಂದುವರೆಸಬೇಕೇ ಅಥವಾ ಮುಕ್ತಾಯಗೊಳಿಸಬೇಕೇ ಎಂಬ ಕುರಿತು ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
Laxmi News 24×7