ಬೆಳಗಾವಿ, ಡಿಸೆಂಬರ್ 15: ಗಾಂಜಾಗಾಗಿ (Drug) ಬೆಳಗಾವಿ ಕೇಂದ್ರ ಕಾರಾಗೃಹದ ಜೈಲಿನ (Hindalaga) ಕೈದಿ ಸಹಾಯಕ ಜೈಲರ್ (Jailar) ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಡಿಸೆಂಬರ್ 11ರಂದು ಸಹಾಯಕ ಜೈಲರ್ ಜಿ.ಆರ್.ಕಾಂಬಳೆ ಅವರ ಮೇಲೆ ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿ ಹಲ್ಲೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಜೈಲು ಅಧಿಕಾರಿಗಳು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಸಹಾಯಕ ಜೈಲರ್ ಜಿ.ಆರ್.ಕಾಂಬಳೆ ಅವರು ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸಹಾಯಕ ಜೈಲರ್ ಜಿ.ಆರ್.ಕಾಂಬಳೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಜೈಲು ಮುಖ್ಯಅಧೀಕ್ಷಕ ಕೃಷ್ಣಮೂರ್ತಿ ಅವರು ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ 132, 115(2), 352 ಮತ್ತು ಎನ್ಡಿಪಿಎಸ್ ಕಾಯ್ದೆ 42 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಹಿಂಡಲಗಾ ಜೈಲಿನಲ್ಲಿ ಗಾಂಜಾ ಸಿಗುತ್ತಿರುವ ಬಗ್ಗೆ ಈ ಹಿಂದೆ ವರದಿ ಮಾಡಿತ್ತು.
ಏನಿದು ಪ್ರಕರಣ
ಡಿಸೆಂಬರ್ 11 ರಂದು ಸಹಾಯಕ ಜೈಲರ್ ಜಿ. ಆರ್. ಕಾಂಬಳೆ ಅವರು ಕೇಂದ್ರ ಕಾರಾಗೃಹದಲ್ಲಿ ಪಹರೆ ಕರ್ತವ್ಯ ಮಾಡುತ್ತಾ ವೃತ್ತ-2ರ ಬ್ಯಾರಕ್ ಸಂಖ್ಯೆ 08 ರ ಹಿಂಭಾಗದ ಗೋಡೆಯ ಕಡೆಗೆ ಹೋಗಿದ್ದಾರೆ. ಗೋಡೆಯ ಪಕ್ಕದಲ್ಲಿ ಜಾಮರ್ ಕೇಬಲ್ಗಳನ್ನು ಅಳವಡಿಸಲು ಅಗೆದಿರುವ ಗುಂಡಿಯಲ್ಲಿ ಪ್ಲಾಸ್ಟಿಕ್ ಸುತ್ತಿದ ಪ್ಯಾಕೇಟ್ ಕಂಡಿದೆ. ಆಗ, ಜಿ. ಆರ್. ಕಾಂಬಳೆ ಅವರು ಪ್ಲಾಸ್ಟಿಕ್ ಸುತ್ತಿದ ಪ್ಯಾಕೇಟ್ ಅನ್ನು ತೆಗೆದುಕೊಂಡು ಮುಖ್ಯ ಅಧೀಕ್ಷಕರಿಗೆ ವರದಿ ಸಲ್ಲಿಸಲು ಹೋಗುತ್ತಿದ್ದರು.
ಈ ವೇಳೆ ಆರೋಪಿ ಶಾಹೀದ್ ಖುರೇಶಿ ಬಂದು ಸಹಾಯಕ ಜೈಲರ್ರವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರಿಗೆ ಕೈಯಿಂದ ತಳ್ಳಾಡಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ. ಬಳಿಕ ಜಿ.ಆರ್. ಕಾಂಬಳೆ ಅವರ ಕೈಯಲ್ಲಿರುವ ಪ್ಲಾಸ್ಟಿಕ್ ಸುತ್ತಿದ್ದ ಪ್ಯಾಕೆಟ್ನ್ನು ಕಿತ್ತುಕೊಂಡು ಓಡಿ ಹೋಗಿ ಕ್ವಾರಂಟೈನ್ ವಿಭಾಗಕ್ಕೆ ಎಸೆದಿದ್ದಾನೆ. ಗಾಂಜಾದಂತಹ ಮಾದಕ ವಸ್ತುಗಳು ಕಾರಾಗೃದಲ್ಲಿ ನಿಷೇಧವಿದೆ ಎಂದು ಗೋತ್ತಿದ್ದರೂ ಈತನು ಅದನ್ನು ಒಳಗೆ ಸಾಗಿಸಲು ಪ್ರಯತ್ನಿಸಿದ್ದು ಅಪರಾಧವೆಂದು ದೂರು ದಾಖಲಿಸಿದ್ದಾರೆ.
Laxmi News 24×7