ಕಲಬುರಗಿ: ಅಕ್ಟೋಬರ್ 28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಎಫ್ಡಿಎ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬೇಟೆ ಮುಂದುವರೆಸಿದ್ದು, ಬುಧವಾರ ಇಬ್ಬರು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಚಂದ್ರಕಾಂತ್ ಬುರಕಲ್ ಮತ್ತು ಅಫಜಲಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಸಣ್ಣ ಪೂಜಾರಿ ಬಂಧಿತರು.
ರಾಯಲ್ ಪಬ್ಲಿಕ್ ಶಾಲೆಯ ಕೆಇಎ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದ ಚಂದ್ರಕಾಂತ್, ಅಧಿಕೃತ ಅಭ್ಯರ್ಥಿಗಳ ಬದಲು ಬೇರೆಯವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು. ಬಸಣ್ಣ ಪೂಜಾರಿ ಪರೀಕ್ಷೆಯ ಕಸ್ಟೋಡಿಯನ್ ಆಗಿದ್ದರು. ಈ ಇಬ್ಬರು ಪ್ರಶ್ನೆ ಪತ್ರಿಕೆಯನ್ನೂ ಸೋರಿಕೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಈಗಾಗಲೇ ಬಂಧಿತ ಆರೋಪಿಗಳು ನೀಡಿದ ಸುಳಿವಿನ ಆಧಾರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಈ ಇಬ್ಬರನ್ನು ಸಿಐಡಿ ಅಧಿಕಾರಿಗಳು ಕರೆಯಿಸಿ ತೀವ್ರ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ಆ ಬಳಿಕ ಇದೀಗ ಬಂಧಿಸಿ ಕಲಬುರಗಿ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.