ದೊಡ್ಡಬಳ್ಳಾಪುರ : ಕ್ರಿಕೆಟ್ ಮ್ಯಾಚ್ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ಈ ಗಲಾಟೆಯನ್ನು ಬಿಡಿಸಲು ಹೋದ ಯುವಕನ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿ ನಿನ್ನೆ (ಬುಧವಾರ) ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಅರವನಹಳ್ಳಿ ಗುಡ್ಡದಹಳ್ಳಿಯ ಪೃಥ್ವಿರಾಜ್ (26) ಗಂಭೀರವಾಗಿ ಗಾಯಗೊಂಡಿದ್ದಾನೆ. ಕರೇನಹಳ್ಳಿಯ ಉಲ್ಲಾಸ್ ಎಂಬ ಯುವಕ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಭಾನುವಾರ ಉಲ್ಲಾಸ್ ಮತ್ತು ಆತನ ಸ್ನೇಹಿತರು ಕ್ರಿಕೆಟ್ ಮ್ಯಾಚ್ ಆಡುವಾಗ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಆ ವೇಳೆ ಜಗಳ ಬಿಡಿಸಲು ಪೃಥ್ವಿರಾಜ್ ಮಧ್ಯೆ ಹೋಗಿದ್ದಾನೆ. ಅನಂತರ ರಾಜಿ-ಪಂಚಾಯ್ತಿ ಮಾಡಲು ಪೃಥ್ವಿರಾಜ್ನನ್ನ ಉಲ್ಲಾಸ್ ಮತ್ತು ಸ್ನೇಹಿತರು ಕರೆದಿದ್ದಾರೆ. ಆಗ ನಾನ್ಯಾಕೆ ಬರ್ಬೇಕು ಎಂದು ಸುಮ್ಮನಾಗಿದ್ದ. ಇದೇ ಕೋಪಕ್ಕೆ ಉಲ್ಲಾಸ್ ಮತ್ತು ಸ್ನೇಹಿತರು ಪೃಥ್ವಿರಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಘಟನೆ ನಂತರ ಪರಾರಿಯಾಗಿದ್ದಾರೆ ಎಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
”ಭಾನುವಾರ ನಡೆದ ಕ್ರಿಕೆಟ್ ಮ್ಯಾಚ್ ವೇಳೆ ಯುವಕರ ನಡುವೆ ಗಲಾಟೆ ಆಗಿದೆ. ಬಾರ್ ಬಳಿ ಗಲಾಟೆ ನಡೆದಿದೆ. ಅನಂತರ ಅವರ ಗುಂಪಿನವರನ್ನು ಈ ಗುಂಪಿನ ಹುಡುಗರು ಹೊಡೆದಿದ್ದರು ಎಂಬ ಕಾರಣಕ್ಕೆ ಮೂರು ನಾಲ್ಕು ದಿನಗಳಿಂದ ಇವರ ಕಡೆಯವರನ್ನು ನಮ್ಮೂರ ಏರಿ ಮೇಲೆಲ್ಲಾ ಹುಡುಕಾಡಿದ್ದಾರೆ. ಮೂರು ಜನ ಇದ್ದರಂತೆ ಅದರಲ್ಲಿ ಒಬ್ಬನು ಕರೆದುಕೊಂಡು ಬಂದಿದ್ದಾನೆ. ಇನ್ನೊಬ್ಬ ಹಿಂದಿನಿಂದ ಹೊಡೆದಿದ್ದಾನೆ. ಆಗ ಅವನು ಅಲ್ಲಿಯೇ ಬಿದ್ದು ಹೋಗಿದ್ದಾನೆ. ಅವನಿಗೆ ಸಿಕ್ಕಾಬಟ್ಟೆ ಗಾಯಗಳಾಗಿವೆ. ಈ ರೀತಿ ಗಲಾಟೆ ನಡೆಯುವುದಕ್ಕೆ ಮತ್ತೊಂದು ಕಾರಣವೆಂದರೆ ಹಳ್ಳಿಗಳಲ್ಲಿ ಹೆಚ್ಚಾಗಿ ಮದ್ಯ ಮಾರುತ್ತಾರೆ. ಎಲ್ಲಾ ಅಂಗಡಿಗಳಲ್ಲೂ ಎಣ್ಣೆ ಸಿಗುತ್ತಿದೆ. ಪೊಲೀಸರು ಹಾಗೂ ಅಬಕಾರಿ ಇಲಾಖೆಯವರ ಗಮನಕ್ಕೂ ತಂದಿದ್ದೇನೆ.