ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿದಾರರ ಹೆಸರು ಸೇರ್ಪಡೆ ಸೇರಿದಂತೆ ಅಗತ್ಯ ತಿದ್ದುಪಡಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೊಂದು ಅವಕಾಶ ನೀಡಿದೆ.
ಇಂದಿನಿಂದ ಮೂರು ದಿನಗಳ ಕಾಲ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಮಾಡಬಹುದಾಗಿದೆ. ಆದರೆ, ಹೊಸ ಕಾರ್ಡ್ ಪಡೆಯಲು ಮತ್ತಷ್ಟು ಕಾಯಬೇಕಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಕಾರ್ಡ್ಗಳಿಗೆ ಹೊಸ
ಹೆಸರು ಸೇರ್ಪಡೆ, ಹೆಸರುಗಳ ಅಕ್ಷರಗಳು, ವಿಳಾಸ ಪರಿಷ್ಕರಣೆ ಸೇರಿದಂತೆ ಯಾವುದೇ ರೀತಿಯ ತಿದ್ದುಪಡಿಗಳಿದ್ದರೂ ಮಾಡಿಸಿಕೊಳ್ಳಬಹುದಾಗಿದೆ. ಹಾಲಿ ಇರುವ ಪಡಿತರ ಚೀಟಿಯಲ್ಲಿನ ಹೆಸರು ರದ್ದುಪಡಿಸುವುದು, ಕುಟುಂಬದ ಹೊಸ ಸದಸ್ಯರ ಹೆಸರು ಸೇರಿಸುವುದಕ್ಕೆ ಅವಕಾಶ ಒದಗಿಸಲಾಗಿದೆ.
ಇಂದಿನಿಂದ ಅಕ್ಟೋಬರ್ 7 ರವರೆಗೆ ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಮೊದಲ ಹಂತ ಮುಗಿಯುತ್ತಿದ್ದಂತೆ ಎರಡನೇ ಹಂತದಲ್ಲಿ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಗದಗ, ಹಾವೇರಿ, ಕೊಡಗು, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಅವಕಾಶ ನೀಡಲಾಗುತ್ತದೆ. ನಂತರ ಉಳಿದ ಜಿಲ್ಲೆಗಳಲ್ಲಿಯೂ ಮೂರನೇ ಹಂತದಲ್ಲಿ ಹೆಸರುಗಳ ಪರಿಷ್ಕರಣೆ ಮಾಡಬಹುದಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.