ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ತಾರಕಕ್ಕೇರಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಜಗಳ ಇನ್ನೂ ನಿಂತಿಲ್ಲ. ಹಾನಗಲ್ ಮತ್ತು ಸಿಂದಗಿ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ ಮೇಲಂತೂ ಸಿದ್ದರಾಮಯ್ಯ ಎಚ್ಡಿಕೆ ಮೇಲೆ ಕೆಂಡಕಾರಿದ್ದರು. ಈಗ ಇದು ತಾತ್ಕಾಲಿಕ ಕದನ ವಿರಾಮವೋ, ಮಾತಿನ ಸಮರವೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಹೌದು, ಈ ಪ್ರಶ್ನೆ ಹುಟ್ಟಿಕೊಂಡಿದ್ದೇ ತಡ ದಿಢೀರನೇ ಸಿದ್ದರಾಮಯ್ಯ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದಾರೆ. ಕುಮಾರಸ್ವಾಮಿ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಾರೆ. ಇನ್ನು, ಮುಂದೆ ಕುಮಾರಸ್ವಾಮಿ ಹೇಳಿಕೆಗಳನ್ನ ನಿರ್ಲಕ್ಷ್ಯಿಸುತ್ತೇನೆ ಎಂದಿದ್ದಾರೆ. ಈ ಮೂಲಕ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದಾರೆ.
ದಳಪತಿಗಳ ಹೇಳಿಕೆಗಳಿಗೆ ಹೆಚ್ಚೆಚ್ಚು ಪ್ರತಿಕ್ರಿಯೆ ನೀಡಿದಷ್ಟು ಅವರಿಗೆ ಲಾಭ. ನಮ್ಮನ್ನ ಕೆರಳಿಸುವ ಮೂಲಕ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡಿದರೆ ಅನಗತ್ಯವಾಗಿ ಕೆಣಕುತ್ತಾರೆ. ಹಾಗಾಗಿ ಅವರನ್ನ ನಿರ್ಲಕ್ಷ್ಯಿಸುತ್ತೇನೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಸಿದ್ದರಾಮಯ್ಯ ತಾತ್ಕಾಲಿಕ ಕದನ ವಿರಾಮ ಘೋಷಿಸಿದರೂ ದಳಪತಿಗಳು ಮಾತಿನ ಸಮರಕ್ಕೆ ಪೂರ್ಣ ವಿರಾಮ ಹಾಕುತ್ತಾರಾ ಎಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಹೇಳಿಕೆಗಳಿಂದ ಕುದಿಯುತ್ತಿದ್ದಾರೆ. ಹೀಗಾಗಿ ದಳಪತಿಗಳು ಮುಂದಿನ ದಿನಗಳಲ್ಲಿಯೂ ಜೆಡಿಎಸ್ ಅಸ್ವಿತ್ವದ ಬಗ್ಗೆ ಪ್ರಶ್ನಿಸಿದ್ದ ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡಲಿದ್ದಾರೆ.