ಬೆಂಗಳೂರು(ಜೂ.21): ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಿಡಕ್ಕೆ ನೀರು ಹಾಕುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಪದ್ಧತಿ. ಜಗತ್ತಿಗೆ ಮಹತ್ತರ ಕೊಡುಗೆಯನ್ನು ದೇಶ ಕೊಟ್ಟಿದೆ. ವಿಜ್ಞಾನ, ತಂತ್ರಜ್ಞಾನ, ಗಣಿತದಿಂದ ಹಿಡಿದು ಹಲವು ವಲಯಗಳಲ್ಲಿ ಕೊಡುಗೆಯನ್ನು ಕೊಟ್ಟಿದೆ. ಅದರಲ್ಲಿ ಯೋಗವು ಒಂದು ಎಂದರು.
ಆಧ್ಯಾತ್ಮ ಯೋಗದ ಒಂದು ಭಾಗ. ಭಾರತೀಯ ಸಂಸ್ಕೃತಿ ಕಣ್ಣುಮುಚ್ಚಿ ಭಗವಂತನನ್ನು ಕಂಡಿದೆ. ಯೋಗದ ಮೂಲಕ ಕಣ್ಣು ಮುಚ್ಚಿ ಭಗವಂತನ ಧ್ಯಾನ ಮಾಡುತ್ತದೆ. ಉಳಿದವರು ಕಣ್ಣು ಬಿಟ್ಟು ಭಗವಂತನ ಕಾಣುವ ಪ್ರಯತ್ನ ನಡೆಸುತ್ತಿದೆ. ಮನಸ್ಸಿನ ಬುದ್ಧಿಯ ಮೂಲಕ ಭಗವಂತನನ್ನು ಕಾಣುವ ಪದ್ಧತಿ ಯೋಗ. ಸಮಾಜದ ಸರ್ವಾಸ್ವ ಕಾಪಾಡಲು ಯೋಗ ಮಹತ್ವ ಕೊಡುಗೆ. ಕೇವಲ ನಮ್ಮ ದೇಶದಲ್ಲಿ ಮಾತ್ರ ಯೋಗವನ್ನು ಪರಿಚಯಿಸದೆ ಜಗತ್ತಿಗೆ ಇದು ಪರಿಚಯವಾಗಿದೆ ಎಂದು ಹೇಳಿದರು ಕಟೀಲ್.ಇನ್ನು, ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಯೋಗ ದಿನವನ್ನು ಬಿಜೆಪಿ ಆಚರಿಸಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪಾಲಿಸಿಕೊಂಡು ಕಡಿಮೆ ಜನ ಸೇರಿ ಯೋಗ ದಿನಾಚರಣೆ ಆಚರಿಸಿದ್ಧಾರೆ.