ಬೆಂಗಳೂರು: ಈಗಾಗಲೇ ಬೇಸಿಗೆ ಆರಂಭವಾಗಿ ಕುಡಿಯುವ ನೀರಿಗೆ ಅನೇಕ ಕಡೆ ಸಮಸ್ಯೆ ಶುರುವಾಗಿದೆ. ಸುಮಾರು 1000 ದಿಂದ 1500 ಅಡಿಗಳಷ್ಟು ಬೋರ್ವೆಲ್ ಕೊರೆದರೂ ನೀರು ಸಿಗುವುದು ತುಂಬಾ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಅವೇರಹಳ್ಳಿ ರೈತನೊಬ್ಬ ಬೋರ್ವೆಲ್ ಕೊರೆಸಿದ್ದು, ಗಗನದೆತ್ತರಕ್ಕೆ ನೀರು ಚಿಮ್ಮಿದೆ.
ಅವೇರಹಳ್ಳಿ ಪ್ರಕಾಶ್ ಕೊಳವೆ ಬಾವಿ ಕೊರೆಸಿ ಸಂತಸಪಟ್ಟಿದ್ದಾರೆ. ಸುಮಾರು 1500 ಅಡಿ ಕೊರೆದರೂ ನೀರು ಸಿಗದ ಬರಡು ಭೂಮಿಯಲ್ಲಿ ಕೇವಲ 790 ಅಡಿಗೆ ನೀರು ಸಿಕ್ಕಿದೆ. ಅಲ್ಲದೆ ಬೋರ್ವೆಲ್ ಕೊರೆಯುವಾಗಲೇ ನೀರು ಗಗನದೆತ್ತರಕ್ಕೆ ಚಿಮ್ಮಿದೆ. ಈ ಬೇಸಿಗೆಯಲ್ಲಿ ಅತಿಯಾದ ನೀರು ದೊರೆತಿರುವುದಕ್ಕೆ ಅವೇರಹಳ್ಳಿ ರೈತ ಪ್ರಕಾಶ್ ಹಾಗೂ ಗ್ರಾಮಸ್ಥರು ಸಂತಸಪಟ್ಟಿದ್ದಾರೆ.
ಪ್ರತಿನಿತ್ಯ ಬೋರ್ವೆಲ್ ಕೊರೆಯುವ ಮಾಲೀಕರು ಹಾಗೂ ಕೆಲಸಗಾರರು ಹೆಚ್ಚಾಗಿ ನೀರು ಬಂದಿದ್ದನ್ನು ಕಂಡು ಸಂತಸಪಟ್ಟಿದ್ದಾರೆ. ಅಲ್ಲದೆ ಬೋರ್ವೆಲ್ ವಾಹನದಲ್ಲಿ ಕೆಲಸ ಮಾಡುವ ಕೆಲಸಗಾರರು ಕೂಡ ಗಗನದೆತ್ತರಕ್ಕೆ ಚಿಮ್ಮುವ ನೀರಿನಲ್ಲಿ ಸ್ನಾನ ಮಾಡಿ ಎಂಜಾಯ್ ಮಾಡಿದ್ದಾರೆ.
ರೈತ ಪ್ರಕಾಶ್ ಮಾತನಾಡಿ, ನಾನು ತೋಟದಲ್ಲಿ ಅನೇಕ ಬೋರ್ ತೆಗೆದಿದ್ದರೂ ಸಹ ಹೆಚ್ಚು ನೀರು ಸಿಗದೇ ನಿರಾಸೆಯನ್ನ ಅನುಭವಿಸಿದ್ದೆ. ಈ ಬೇಸಿಗೆಯಲ್ಲೂ ಇಂದು ಹೆಚ್ಚಾಗಿ ನೀರು ಬಂದಿರುವುದರಿಂದ ಮುಂದೆ ಯಾವುದೇ ಸಮಸ್ಯೆ ಇಲ್ಲದೆ ನೀರು ಉಪಯೋಗಿಸಬಹುದು. ಅಲ್ಲದೆ ನೀರಿನ ಸಮಸ್ಯೆ ಇರುವ ಜನರಿಗೆ ಉಚಿತವಾಗಿ ನೀರು ಕೊಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.