Breaking News

LIC ದುಡ್ಡಿನ ಆಸೆಗಾಗಿ ತಮ್ಮನನ್ನೇ ಕೊಂದ ಅಣ್ಣ

Spread the love

ತುಮಕೂರು: ಎಲ್‌ಐಸಿ ಪಾಲಿಸಿಯಿಂದ  ಸಿಗುವ 30 ಲಕ್ಷ ರೂ. ಆಸೆಗೆ ಸ್ವಂತ ತಮ್ಮನನ್ನೇ  ಅಣ್ಣ ಕೊಲೆ ಮಾಡಿದ್ದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಬೈಕ್ ಅಪಘಾತದ ಪ್ರಕರಣ ಭೇದಿಸಿದ ತುಮಕೂರು  ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸರು ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ.

ದುಡ್ಡು ಅಂದರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಮಾತಿದೆ. ಅಂಥ ದುಡ್ಡಿಗಾಗಿ ಎಂಥ ಹೇಯ ಕೃತ್ಯ ಮಾಡಲು ಜನ ಹಿಂದೂ ಮುಂದೂ ನೋಡಲ್ಲ. ಇಲ್ಲೊಬ್ಬ ಅಣ್ಣ, ತಮ್ಮನ ಹೆಸರಲ್ಲಿ ಇರುವ ಎಲ್‌ಐಸಿ ಪಾಲಿಸಿ ಹಣ ಲಪಟಾಯಿಸಲು ಸ್ವಂತ ತಮ್ಮನನ್ನೇ ಕೊಲೆ ಮಾಡಿ ಬೈಕ್ ಅಪಘಾತ ಎಂದು ಕಥೆ ಕಟ್ಟಿದ್ದಾನೆ.

ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದೊಂದು ಘಟನೆ ನಡೆದಿದೆ. 35 ವರ್ಷದ ರಮೇಶ್‌ನನ್ನು ಅಣ್ಣ ಹನುಮಂತರಾಜು ಕೊಲೆ ಮಾಡಿ ನಾಟಕವಾಡಿದ್ದಾನೆ. ಮೃತ ರಮೇಶ್ ಮೂಲತಃ ಆಂಧ್ರಪ್ರದೇಶದವನು. ಕಳೆದ 6 ವರ್ಷದಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮತ್ತು ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದ. ಹೆಂಡತಿಯಿಂದ ದೂರವಾಗಿ ಮಾಟಮಂತ್ರ ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಅಲ್ಲದೇ ತನ್ನ ಸ್ವಂತ ಅಣ್ಣಂದಿರ ಸಂಸಾರಕ್ಕೆ ಮಾಟಮಂತ್ರ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.

ತಮ್ಮ ರಮೇಶ್ ಹೆಸರಿಗೆ ಅಣ್ಣ ಹನುಮಂತರಾಜು 15 ಲಕ್ಷ ರೂಪಾಯಿ ಎಲ್‌ಐಸಿ ಪಾಲಿಸಿ ಮಾಡಿಸುತ್ತಾನೆ. ಅದರ ನಾಮಿನಿ ತನ್ನ ಹೆಸರಿಗೆ ಮಾಡಿಸಿಕೊಳ್ಳುತ್ತಾನೆ. ಅಣ್ಣ ಹನುಮಂತರಾಜು ಪ್ರತಿ ವರ್ಷಕ್ಕೆ ತಮ್ಮನ ಪಾಲಿಸಿಗೆ 85,000 ರೂ. ವಿಮಾ ಕಂತನ್ನು ಪಾವತಿ ಮಾಡುತ್ತಾನೆ. ಚಾಲ್ತಿಯಲ್ಲಿ ಇರುವ ವಿಮೆಯು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ನಾಮಿನಿದಾರರಿಗೆ ವಿಮೆ ಮೊತ್ತದ ಡಬಲ್ ಹಣ ಅಂದರೆ 30 ಲಕ್ಷ ಹಣ ಪಾವತಿಯಾಗುವಂತೆ ಇತ್ತು. ಈ ಹಣದ ದುರಾಸೆಯಿಂದ ಆರೋಪಿ ಹನುಮಂತರಾಜು ತಮ್ಮನನ್ನೇ ಕೊಲೆ ಮಾಡಿದ್ದಾನೆ. ಬೆಂಗಳೂರಿನ ನವಯುಗ ಟೋಲ್ ಬಳಿಯ ತನ್ನ ಅಂಗಡಿಗೆ ಬರುತಿದ್ದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ.ಜಿಲಾನ್ ಜೊತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆ ವೇಳೆ ಗೊತ್ತಾಗಿದೆ.

ಕಳೆದ ಜೂನ್ 19ರಂದು ಯಾವುದೋ ನಿಧಿ ಪೂಜೆ ಇದೆ ಎಂದು ರಮೇಶ್‌ನನ್ನು ಶಿರಾ ಅಮರಾಪುರ ರಸ್ತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ದೊಣ್ಣೆಯಿಂದ ಆತನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಕಾರು ಹರಿಸಿದ್ದಾರೆ. ಆಗಲೂ ಜೀವ ಹೋಗದಿದ್ದಾಗ ಬ್ಯಾಟರಿ ಜಂಪಿಂಗ್ ವಯರ್ ಮೂಲಕ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವ ಹಾಗೂ ಬೈಕನ್ನು ರಸ್ತೆಯಲ್ಲಿ ಹಾಕಿದ್ದಾರೆ. ಬಳಿಕ ಬೈಕ್‌ನ ಮುಂಭಾಗವನ್ನು ಇವರೇ ಜಖಂ ಮಾಡಿ ಅಪಘಾತದ ನಾಟಕ ಮಾಡಿದ್ದಾರೆ.

ಮೃತನ ಹಿರಿಯ ಅಣ್ಣ ರಂಗನಾಥ ಕೊಟ್ಟ ದೂರಿನ ಪ್ರಕಾರ ಪೊಲೀಸರು ಅನುಮಾನಸ್ಪದ ಸಾವು ಎಂದು ಎಫ್‌ಐಆರ್ ದಾಖಲಿಸಿದರು. ನಂತರ 3 ತಂಡಗಳನ್ನು ರಚಿಸಿದ ಪೊಲೀಸರು ಆರೋಪಿ ಹನುಮಂತರಾಜು ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಎಚ್ಚರಿಕೆ – ಐದು ದಿನ ಆರೆಂಜ್ ಅಲರ್ಟ್‌

Spread the loveಕಾರವಾರ: ರಾಜ್ಯದಲ್ಲಿ ಮುಂಗಾರು ಕೊರತೆ ನಡುವೆ ಇದೀಗ ಮಳೆಯು ತನ್ನ ವೇಗ ಪಡೆದುಕೊಳ್ಳುವ ಮುನ್ಸೂಚನೆ ದುರೆತಿದೆ. ಉತ್ತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ