ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಗೆಲುವು ಸಖತ್ ಕ್ರೇಜ್ ಹುಟ್ಟುಹಾಕಿದೆ. ದಶಕಗಳ ಇತಿಹಾಸ ಹೊಂದಿರುವ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಬಲ ಪಕ್ಷಗಳನ್ನು ಹಿಂದಿಕ್ಕಿ ಗೆಲುವಿನ ಪತಾಕೆ ಹಾರಿಸಿದ್ದಾಗಿದೆ. ಈ ರಾಜಕೀಯ ವಿಜಯೋತ್ಸವದ ಸಮಯದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಮತ್ತೊಂದು ಹೆಸರು ‘ತ್ರಿಷಾ’.
ಹೌದು, ವಿಜಯ್ ಯಶಸ್ಸಿನ ಬೆನ್ನಲ್ಲೇ ನಾಯಕಿ ತ್ರಿಷಾ ಸ್ವತಃ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ. ಇದು ಕೇವಲ ಅಭಿನಂದನೆಗಳಿಗೆ ಸೀಮಿತವಾಗಿಲ್ಲ, ಇದರ ಹಿಂದೆ ದೊಡ್ಡ ರಾಜಕೀಯ ಸಮೀಕರಣವಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅತ್ಯಂತ ಕುತೂಹಲಕಾರಿ ಸುದ್ದಿಯೆಂದರೆ ತ್ರಿಷಾ ಶೀಘ್ರದಲ್ಲೇ ರಾಜಕೀಯ ಪ್ರವೇಶಿಸಲಿದ್ದಾರೆ. ವಿಜಯ್ ಸಂಪುಟದಲ್ಲಿ ಅವರಿಗೆ ಪ್ರಮುಖ ಸ್ಥಾನ ಸಿಗಲಿದೆ. ಒಂದು ಹಂತದಲ್ಲಿ ತ್ರಿಷಾ ತಮಿಳುನಾಡಿನ ‘ಉಪ ಮುಖ್ಯಮಂತ್ರಿ’ ಆಗಲಿದ್ದಾರೆ ಎಂಬ ಊಹಾಪೋಹಗಳೂ ಹೆಚ್ಚಾಗಿವೆ.
ವಿಜಯ್ ತಿರುಚಿ ಪೂರ್ವ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಈ ಪೈಕಿ ಒಂದು ಸ್ಥಾನಕ್ಕೆ ವಿಜಯ್ ರಾಜೀನಾಮೆ ನೀಡಬೇಕಾಗುತ್ತದೆ. ಟಿವಿಕೆ ಮೂಲಗಳ ಪ್ರಕಾರ, ವಿಜಯ್ ಅವರಿಂದ ತೆರವಾದ ಸ್ಥಾನದಲ್ಲಿ ತ್ರಿಷಾ ಸ್ಪರ್ಧಿಸುವ ನಿರೀಕ್ಷೆಯಿದೆ. ಅಲ್ಲಿ ಗೆದ್ದ ನಂತರ ಅವರಿಗೆ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುವುದು ಎಂಬ ವದಂತಿ ಇದೆ.
ಇನ್ನು, ಚುನಾವಣೆಗೂ ಮುಂಚೆಯೇ, ವಿಜಯ್ ಮತ್ತು ತ್ರಿಷಾ ಬಗ್ಗೆ ವಿವಿಧ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದವು. ವಿಶೇಷವಾಗಿ ವಿಜಯ್ ತನ್ನ ಪತ್ನಿಗೆ ವಿಚ್ಛೇದನ ನೀಡುತ್ತಿದ್ದಾರೆ ಎಂಬ ವದಂತಿಗಳು ಬಂದಾಗ, ತ್ರಿಷಾ ಹೆಸರು ಜೋರಾಗಿ ಕೇಳಿಬಂದಿತ್ತು. ಇಬ್ಬರೂ ಒಟ್ಟಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದಾಗ ವದಂತಿಗಳು ಇನ್ನಷ್ಟು ಹೆಚ್ಚಾದವು. ಈಗ, ವಿಜಯ್ ಗೆಲುವಿನ ನಂತರ ತ್ರಿಷಾ ಸಕ್ರಿಯವಾಗಿ ಕಾಣಿಸಿಕೊಳ್ಳುವುದು ಆ ಸುದ್ದಿಗಳಿಗೆ ಮತ್ತೆ ಬಲ ತುಂಬುತ್ತಿದೆ. ಆದರೆ ವಿಜಯ್ ಹಾಗೂ ತ್ರಿಷಾ ಈ ವಿಷಯಗಳಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ತಮಿಳುನಾಡು ರಾಜಕೀಯದಲ್ಲಿ ನಟಿ ತ್ರಿಷಾ ಈಗ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡಿನ ಸಿನಿಮಾ ತಾರೆಯರು ರಾಜಕೀಯ ಪ್ರವೇಶಿಸುವುದು ಹೊಸದೇನಲ್ಲ. ಈ ಹಿಂದೆ ಎಂಜಿಆರ್ ಮತ್ತು ಜಯಲಲಿತಾ ಅವರಂತಹವರು ಬೆಳ್ಳಿ ಪರದೆಯಿಂದ ರಾಜಕೀಯವನ್ನು ಆಳುತ್ತಿದ್ದರು. ಈಗ ವಿಜಯ್ ಅದೇ ಹಾದಿಯಲ್ಲಿದ್ದಾರೆ. ಹಾಗಾದ್ರೆ, ತ್ರಿಷಾ ಬೆಂಬಲಕ್ಕೆ ನಿಲ್ಲುತ್ತಾರಾ? ಅಥವಾ ಇವೆಲ್ಲವೂ ಸಾಮಾಜಿಕ ಮಾಧ್ಯಮಗಳು ಸೃಷ್ಟಿಸಿದ ವದಂತಿಗಳೇ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
Laxmi News 24×7