ಇವರಿಬ್ಬರದ್ದು ಬಡತನದಲ್ಲೇ ಅರಳಿದ್ದ ಅಪರೂಪದ ಪ್ರೀತಿ.. ಜೀವಕ್ಕೆ ಜೀವ ಅಂತಿದ್ದವರು ಪ್ರೀತಿಸಿ ಮದುವೆ ಎನ್ನುವ ಬಂಧದಲ್ಲಿ ಬಂಧಿಯಾಗಿದ್ದರು. ಮನೆಯಲ್ಲಿ ಅದೆಷ್ಟೇ ಬಡತನವಿದ್ದರೂ ಇವರ ಪ್ರೀತಿಗೆ ಮಾತ್ರ ಯಾವುದೇ ಬಡತನವಿರಲಿಲ್ಲ. ಮುದ್ದಾದ ಮಗಳೊಂದಿಗೆ ‘ನನಗೆ ನೀನು, ನಿನಗೆ ನಾನು’ ಅಂತಾ ಇರೋದ್ರಲ್ಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು.
ಆದರೆ, ಇವರ ಈ ಪುಟ್ಟ ಸಂಸಾರದ ಖುಷಿಯನ್ನು ಆ ಭಗವಂತನಿಗೂ ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ ಅನಿಸುತ್ತದೆ.. ಬಸ್ ರೂಪದಲ್ಲಿ ಬಂದ ಜವರಾಯ ಇಡೀ ಸಂಸಾರವನ್ನೇ ಮುಗಿಸಿಬಿಟ್ಟಿದ್ದಾನೆ! ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಗಂಡ, ಹೆಂಡತಿ ಹಾಗೂ ಮಗಳು ಬಿದ್ದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಅದೇ ಕೊನೆಯ ಊಟ ಅಂದುಕೊಂಡಿರಲಿಲ್ಲ ಆ ಜೀವಗಳು..!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಅರುಣ್ ಹಾಗೂ ಅವರ ಪತ್ನಿ ಅನುಷಾ ದಂಪತಿಯ ದುರಂತ ಅಂತ್ಯವಿದು. ನಿನ್ನೆ ರಾತ್ರಿ ಮನೆಯಲ್ಲಿ ಅಡುಗೆ ಮಾಡುವುದು ಬೇಡ, ಎಲ್ಲರೂ ಹೊರಗಡೆ ಹೋಗಿ ಊಟ ಮಾಡೋಣ ಎಂದು ಖುಷಿಯಿಂದ ಮಗಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಟೆಲ್ಗೆ ಹೋಗಿದ್ದರು. ಹೋಟೆಲ್ನಲ್ಲಿ ಎಲ್ಲರೂ ಒಟ್ಟಾಗಿ ಖುಷಿ ಖುಷಿಯಾಗಿ ಊಟವನ್ನೂ ಮಾಡಿದ್ದರು. ಆದರೆ, ಅದೇ ತಮ್ಮ ಪಾಲಿನ ಕೊನೆಯ ಊಟ ಆಗುತ್ತದೆ ಎಂದು ಆ ಮಂದಭಾಗ್ಯರು ಊಹಿಸಿರಲೂ ಇಲ್ಲ!
ಹೋಟೆಲ್ನಿಂದ ಹೊರಟು ಇನ್ನೇನು ಸ್ವಲ್ಪ ದೂರ ಹೋದರೆ ಮನೆ ಸೇರಬೇಕಿತ್ತಷ್ಟೇ. ಅಷ್ಟರಲ್ಲೇ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪಕ್ಕದ ಖಾಸಗಿ ಕಂಪನಿಯ ಬಳಿ ಅತಿವೇಗವಾಗಿ ನುಗ್ಗಿ ಬಂದ ಕಿಲ್ಲರ್ ಬಿಎಂಟಿಸಿ ಬಸ್ ಇವರ ಬೈಕ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅರುಣ್, ಅನುಷಾ ಹಾಗೂ ಮಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಿಎಂಟಿಸಿ ಚಾಲಕನ ನಿರ್ಲಕ್ಷ್ಯ ಹಾಗೂ ರಸ್ತೆ ಪಕ್ಕದ ಲಾರಿಗಳದ್ದೇ ತಪ್ಪು!
ಈ ಭೀಕರ ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕನ ಬೇಜವಾಬ್ದಾರಿತನ ಒಂದು ಕಡೆಯಾದರೆ, ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಪಾರ್ಕ್ ಮಾಡಿರುವ ಲಾರಿಗಳು ಮತ್ತೊಂದು ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಖಾಸಗಿ ಕಂಪನಿಗಳ ಮುಂಭಾಗ ರಸ್ತೆಯ ಇಕ್ಕೆಲಗಳಲ್ಲೇ ಸಾಲುಗಟ್ಟಿ ಲಾರಿಗಳನ್ನು ಪಾರ್ಕ್ ಮಾಡುವುದರಿಂದ ಹಿಂದಿನಿಂದ ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ಈ ಜಾಗದಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದ್ದು, ಸರಣಿ ಅಪಘಾತಗಳಿಗೆ ಇದುವೇ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Laxmi News 24×7