ಬೈಲಹೊಂಗಲ: ನಗರದ ಟಿಪ್ಪು ಸುಲ್ತಾನ್ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಇಟ್ಟಿದ್ದ 1.50 ಲಕ್ಷ ರೂ. ಠೇವಣಿ ಅವಧಿ ಪೂರ್ಣಗೊಂಡಿದ್ದರೂ ಮರಳಿಸದೆ ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ಇಮ್ತಿಯಾಜ್ ಸುತಗಟ್ಟಿ ಕುಟುಂಬದವರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳ ಬೆಂಬಲದೊಂದಿಗೆ ನಡೆದ ಧರಣಿಯಲ್ಲಿ ಇಮ್ತಿಯಾಜ್ ಸುತಗಟ್ಟಿ ಮಾತನಾಡಿ, ದೃಷ್ಟಿ ಹೀನನಾಗಿರುವ ನಾನು ಮನೆ ನಿರ್ಮಾಣಕ್ಕಾಗಿ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣ ಮರಳಿ ಪಡೆಯಲು ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಠೇವಣಿ ಹಣ ವಾಪಸು ನೀಡಲು ನ್ಯಾಯಾಲಯ ಆದೇಶ ಹೊರಡಿಸಿದ್ದರೂ, ಸೊಸೈಟಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿರು.
ಸಮಾಜ ಸೇವಕ ರಫೀಕ್ ಬಡೇಘರ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಹಾಗೂ ಪುಣ್ಯಕೋಟಿ ಸಂಘಟನೆ ಮಂಜುನಾಥ ಮರಶೆಟ್ಟಿ ಮಾತನಾಡಿ, ಇಮ್ತಿಯಾಜ್ ಸುತಗಟ್ಟಿ ಅವರು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣ ಮರಳಿಸಲು ಗ್ರಾಹಕ ನ್ಯಾಯಾಲಯ ಆದೇಶಿಸಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಎಸಿ ಪ್ರವೀಣ ಜೈನ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಪ್ರತಿಕ್ರಿಯಿಸಿ, ಇಮ್ತಿಯಾಜ್ ಸುತಗಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ಬಳಿಕ ಅಹೋರಾತ್ರಿ ಧರಣಿ ಹಿಂಪಡೆಯಲಾಯಿತು. ರೈತ ಮುಖಂಡ ಅಪ್ಪಾಸಾಹೇಬ ಲಕ್ಕುಂಡಿ, ಮಂಜುನಾಥ ಮರೆಶೆಟ್ಟಿ, ಶಿವಾನಂದ ಕುರಬೆಟ್ಟ, ರಿತೇಶ ಪಾಟೀಲ, ಆನಂದಗೌಡ ಪಾಟೀಲ, ನಾಗರಾಜ ಸಂಗೊಳ್ಳಿ, ಶೋಯಬ್ ಸಂಗೊಳ್ಳಿ, ಅಭಿಷೇಕ ಕಲಾಲ, ಹಮ್ಜೇಸಾಬ್ ನಂದಗಡ, ಸುಭಾನಿ ನಂದಗಡ ಇತರರಿದ್ದರು.
Laxmi News 24×7