Breaking News

ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ರೈತರು ಬೆಳೆ ಬೆಳೆಯಬೇಡಿ ಎಂದಿರೋದು ಆಶ್ಚರ್ಯ: ಸಿಎಂ ಹೇಳಿಕೆಗೆ ವಿಜಯೇಂದ್ರ ಕಿಡಿ

Spread the love

ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ರೈತರು ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿ ಹೇಳಿರುವುದು ಆಶ್ಚರ್ಯಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಬರಗಾಲದ ಮುನ್ಸೂಚನೆ ಇದೆ. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ಅದಕ್ಕಾಗಿ ರೈತರು ಬೆಳೆ ಬೆಳೆಯಬೇಡಿ ಎಂದು ಸಿಎಂ ಹೇಳಿರುವುದು ಆಶ್ಚರ್ಯ ಹಾಗೂ ನೋವು ತಂದಿದೆ. ಮುಖ್ಯಮಂತ್ರಿಯವರ ಈ ಹೇಳಿಕೆ ರಾಜ್ಯದ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ. ಮುಖ್ಯಮಂತ್ರಿಗಳು ಬಹಳ ಪ್ರಬುದ್ಧತೆಯಿಂದ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಬರದ ಛಾಯೆ ಆವರಿಸಿದೆ. ಪ್ರಕೃತಿ ಮುನಿಸಿಕೊಂಡಿರುವ ಈ ಸಂದರ್ಭದಲ್ಲಿ ರೈತರಿಗೆ ಅಭಯ ನೀಡಬೇಕು. ಮುಂದಿನ 15 ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಸಿಎಂ ಬಿತ್ತನೆ ಮಾಡಬೇಡಿ ಎಂದು ಹೇಳಿದ್ದಾರೆ. ರೈತರು ಬಿತ್ತನೆ ಮಾಡದೇ ಇದ್ದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮಳೆ ಪ್ರಮಾಣ ಕಡಿಮೆಯಾಗಿರುವಾಗ ಸರ್ಕಾರದ ಆದ್ಯತೆ ಏನು? ಜಿಲ್ಲಾಧಿಕಾರಿಗಳ ಖಾತೆಗೆ ಅಥವಾ ರೈತರಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿದ್ದಾರೆಯೇ? ಯಾವುದನ್ನೂ ಮಾಡದೆ ಸಿಎಂ ಕೈಕಟ್ಟಿ ಕುಳಿತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಜಲಾಶಯಗಳಿಂದ ಎಷ್ಟು ಪ್ರಮಾಣದ ನೀರು ಬಿಡಲಾಗಿದೆ ಎಂಬ ಮಾಹಿತಿ ಸರ್ಕಾರ ನೀಡಬೇಕು. ನಮ್ಮ ಜಲಾಶಯಗಳಿಂದ ಮನಸ್ಸೋ ಇಚ್ಛೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಮೈತ್ರಿ ಪಕ್ಷವನ್ನು ಖುಷಿಪಡಿಸಲು ರಾತ್ರೋರಾತ್ರಿ ನೀರು ಬಿಟ್ಟರು. ಈಗ ಜ್ಞಾನೋದಯ ಆಗಿದೆಯೇ?ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ನೀರು ಬಿಡಿಸಿಕೊಳ್ಳಬೇಕಿತ್ತು. ನೀರು ಬಿಡುವಾಗ ಬರಗಾಲದ ಪರಿಸ್ಥಿತಿ ನೆನಪಾಗಲಿಲ್ಲವೇ? ಈಗ ಯಾಕೆ ಈ ಕಪಟ ನಾಟಕ? ರಿಯಲ್ ಎಸ್ಟೇಟ್ ಬಗ್ಗೆ ಮಾತ್ರ ಕಾಳಜಿ ಇರುವವರು ಆಡಳಿತ ನಡೆಸಿದರೆ ರಾಜ್ಯದ ಹಣೆಬರಹ ಇದೇ ಆಗುತ್ತದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಡ್ರಗ್ ಪೆಡ್ಲರ್ ಬಂಧನಕ್ಕೆ ಹೋದ ಪೊಲೀಸರಿಗೆ ಶಾಕ್; 17 ಲಾಂಗು, 230 ಮೊಬೈಲ್ ಜಪ್ತಿ

Spread the loveಬೆಂಗಳೂರು: ಡ್ರಗ್ ಪೆಡ್ಲರ್‌ನನ್ನು ಬಂಧಿಸಲು ತೆರಳಿದ್ದ ಬ್ಯಾಟರಾಯನಪುರ ಪೊಲೀಸರಿಗೆ ಶಾಕ್ ಎದುರಾಗಿದ್ದು. ಆರೋಪಿ ಮನೆಯ ಮೇಲೆ ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ