ಚಿಕ್ಕೋಡಿ: ಬೆಳಗಾವಿ ಜಿಲ್ಲಾ ರಾಜಕಾರಣಿಗಳಿಗೆ ಸರ್ಕಾರ ಉರಳಿಸುವ ತಾಕತ್ತುಯಿದೆ. ಜಿಲ್ಲಾ ಉಸ್ತುವಾರಿ ಸ್ಥಾನ ಪಡೆಯುವ ಧಮ್ ಬೆಳಗಾವಿ ನಾಲ್ವರು ಸಚಿವರಿಗೆ ಇಲ್ಲವೆ ಎಂದು ಹಿರಿಯ ರಾಜಕಾರಣಿ ಮತ್ತು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ತೆಗೆದುಕೊಳ್ಳಲು ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗೆ ಧಮ್ಮಯಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ. ಅದಕ್ಕಾಗಿ ಹೊರ ಜಿಲ್ಲೆಯವರಾದ ಜಗದೀಶ ಶೆಟ್ಟರ ಅವರಿಗೆ ನೀಡಿದ್ದಾರೆ ಎಂದರು.
ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಹೊರ ಜಿಲ್ಲೆಯವರಾದ ಜಗದೀಶ ಶೆಟ್ಟರ ಅವರಿಗೆ ನೀಡುತ್ತಾರೆ. ಆದರೆ ಇಲ್ಲಿನ ಸಚಿವರು ಏನೂ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಕೊರೊನಾ ತಡೆಗಟ್ಟುವಲ್ಲಿ ಕೇಂದ್ರ-ರಾಜ್ಯ ಸರಕಾರ ಅಗತ್ಯವಾದ ಕ್ರಮ ಕೈಗೊಂಡಿದೆ. ಇಲ್ಲಿನ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉತ್ತಮವಾದ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕೊರೊನಾ ನಿಯಂತ್ರಣ ಮಾಡುವಲ್ಲಿ ಅಖಂಡ ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಅದಕ್ಕಾಗಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಚಿಕ್ಕೋಡಿಗೆ ಓರ್ವ ಜಿಲ್ಲಾಧಿಕಾರಿ,ಎಸ್ ಪಿ ಕೊಡಬೇಕು. ಇಲ್ಲಿನ ಸರಕಾರಿ ಆಸ್ಪತ್ರೆಯನ್ನು 500 ಹಾಸಿಗೆಗಳ ಮೇಲ್ದೆರ್ಜಿಗೇರಿಸಬೇಕು. ಕೂಡಲೇ ಚಿಕ್ಕೋಡಿಗೆ ಮೆಡಿಕಲ್ ಕಾಲೇಜ್ ಮಂಜೂರ ಮಾಡುವಂತೆ ಒತ್ತಾಯಿಸಿದರು.
ಕೊರೊನಾ ತಪಾಸಣಾ ಕೇಂದ್ರ ಬೆಳಗಾವಿಗೆ ಮಂಜೂರಾಗಿರುವದನ್ನು ಜಿಲ್ಲಾ ಉಸ್ತುವಾರಿ ಸಚಿವರು ಹುಬ್ಬಳಿಯಲ್ಲಿ ಪ್ರಾರಂಭಿಸುವ ಮೂಲಕ ಬೆಳಗಾವಿ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದರು.
ಬೆಳಗಾವಿಯಲ್ಲಿ ನಾಲ್ವರು ಸಚಿವರಲ್ಲಿ ಯಾರಿಗಾದರು ಒಬ್ಬರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡುವಂತೆ ಒತ್ತಾಯಿಸಿದರು. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳುವಂತೆ ಜನರಲ್ಲಿ ಮನವಿ ಮಾಡಿದರು.