ಬೆಂಗಳೂರು: ಕರ್ನಾಟಕದಲ್ಲಿ ಅತೀ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇವಾಲಯ ಅಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ. ಬೆಂಗಳೂರು ಸೇರಿದಂತೆ ಪ್ರತಿನಿತ್ಯ ಸಾವಿರಾರು ಭಕ್ತರು ಧರ್ಮಸ್ಥಳ ಮಂಜುನಾಥನ ದರ್ಶನಕ್ಕಾಗಿ ಹೋಗ್ತಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ದರ್ಶನ ಮಾಡಿಕೊಂಡು ಬರ್ತಾರೆ. ಇನ್ಮುಂದೆ ಕ್ಯೂನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಅದಕ್ಕಾಗಿಯೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹೊಸ ಪ್ರವಾಸ ಪ್ಯಾಕೇಜ್ ತಂದಿದೆ.
ರಾಜಧಾನಿಯಿಂದ ಧರ್ಮಸ್ಥಳಕ್ಕೆತೆರಳೋ ಭಕ್ತಾದಿಗಳಿಗೆ ಕೆಎಸ್ಟಿಡಿಸಿ ಬಂಪರ್ ಆಫರ್ ಕೊಟ್ಟಿದ್ದು, ತಿರುಪತಿ ಮಾದರಿಯಲ್ಲಿ ಶೀಘ್ರದಲ್ಲೇ ದರ್ಶನ ಮುಗಿಸಿ ಬರಬಹುದಾಗಿದೆ.
ಪ್ರವಾಸ ಪ್ಯಾಕೇಜ್ನ ವಿಶೇಷತೆ ಏನು?
ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೌತ್ಕಡಕಕ್ಕೆ ಟೂರ್ ಪ್ಯಾಕೇಜ್ ಆರಂಭಿಸುತ್ತಿದೆ. ಮೊದಲಿಗೆ ಪ್ರಾಯೋಗಿಕ ಹಂತದಲ್ಲಿ ವಾರದಲ್ಲಿ ಒಮ್ಮೆ ಈ ಟೂರ್ ಪ್ಯಾಕೇಜ್ ಆರಂಭಿಸುತ್ತಿದೆ. ಈ ಪ್ಯಾಕೇಜ್ 2 ದಿನ ಮತ್ತು 1 ರಾತ್ರಿ ಒಳಗೊಂಡಿರಲಿದೆ.
ಈ ಹಿಂದೆ ತಿರುಪತಿಗೆ ಶೀಘ್ರ ದರ್ಶನದ ವ್ಯವಸ್ಥೆ ಹೇಗೆ ಕಲ್ಪಿಸಲಾಗಿತ್ತೋ, ಹಾಗೆಯೇ ಧರ್ಮಸ್ಥಳದ ಪ್ರವಾಸವೂ ಇರಲಿದೆ. ಪ್ಯಾಕೇಜ್ ಪ್ರವಾಸದಲ್ಲಿ ಹೋಗುವ ಭಕ್ತರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಇರಲಿದ್ದು, ಶ್ರೀ ಮಂಜುನಾಥನ ದರ್ಶನಕ್ಕೆ ಶೀಘ್ರ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕೆಎಸ್ಟಿಡಿಸಿ ಅಧಿಕಾರಿ ವೇಣುಗೋಪಾಲ್ ತಿಳಿಸಿದ್ದಾರೆ.
ಪ್ಯಾಕೇಜ್ ದರ ಎಷ್ಟು?
ಈ ಪ್ರವಾಸವು 2 ಹಂತದ ಪ್ಯಾಕೇಜ್ಗಳನ್ನ ಒಳಗೊಂಡಿದೆ. ಪ್ರೀಮಿಯಂ ಪ್ಯಾಕಜ್ನಲ್ಲಿ ಒಬ್ಬರಿಗೆ 4,450 ರೂ. ಆಗಲಿದೆ. ಇದು ಹೋಟೆಲ್ ವಾಸ್ತವ್ಯ ಮತ್ತು ಉಪಹಾರ ವ್ಯವಸ್ಥೆಯೂ ಒಳಗೊಂಡಿರುತ್ತದೆ. ಬಜೆಟ್ ಫ್ರೇಂಡ್ಲಿ ಪ್ಯಾಕೇಜ್ ನಲ್ಲಿ ಒಬ್ಬ ವ್ಯಕ್ತಿಗೆ 3,450 ರೂ. ಆಗಲಿದೆ. AC ಡೀಲಕ್ಸ್ ಬಸ್ ಒದಗಿಸಲಾಗುತ್ತದೆ.
Laxmi News 24×7