ರಾಮನಗರ: ಹೆಮ್ಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದರೆ ರಾಮನಗರ ಜಿಲ್ಲೆಯಾದ್ಯಂತ ಕಾಳಸಂತೆಯಲ್ಲಿ ಮಾರಾಟ ಹಾಗೂ ದಾಸ್ತಾನು ಮಾಡಿಕೊಂಡಿದ್ದ ಮೂರು ಕಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಅದರಲ್ಲೂ ರಾಮನಗರ ತಾಲೂಕಿನ ಕುಂಬಾಪುರ ಗೇಟ್ನಲ್ಲಿನ ಬ್ಲೂ ಸ್ಟಾರ್ ಡಾಬಾ, ಲಕ್ಷ್ಮೀಪುರ, ಬಸವನ ಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಲಾಗಿತ್ತು. ಎಣ್ಣೆ ಖರೀದಿ ಬರುವ ಮದ್ಯ ಪ್ರಿಯರಿಗೆ, ಎರಡು ಇಲ್ಲವೇ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಆರೋಪಿಗಳು ಮುಂದಾಗಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು ಆರು ಕೇಸ್ ಬಿಯರ್ ಹಾಗೂ ನಾಲ್ಕು ಕೇಸ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಲಾಕ್ಡೌನ್ ಆರಂಭವಾದಾಗಿನಿಂದ ಇಲ್ಲಿಯ ತನಕ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು 293 ಕಡೆ ದಾಳಿ ನಡೆಸಿದ್ದಾರೆ. ಈ ಮೂಲಕ 36.075 ಲೀಟರ್ ಮದ್ಯ ಮತ್ತು 61.150 ಲೀ ಬಿಯರ್ ಅನ್ನು ಜಪ್ತಿ ಪಡಿಸಿಕೊಂಡು 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.