ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಮುನ್ನವೇ ದೆಹಲಿಗೆ ತಮ್ಮ ತಂಡದ ಶಾಸಕರೊಂದಿಗೆ ತರೆಳಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ವರಿಷ್ಠರ ಮೇಲೆ ಒತ್ತಡ ಹಾಕಲಿದ್ದಾರೆ. ಶಾಸಕರಾದ ಸಹೋದರ ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಶ್ರೀಮಂತ ಪಾಟೀಲ್ ಜೊತೆ ದೆಹಲಿಯಲ್ಲೇ ರಮೇಶ್ ಜಾರಕಿಹೊಳಿ ಠಿಕಾಣಿ ಹೂಡಿದ್ದರು.
ತಮ್ಮ ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಬೆಳಗಾವಿ ಪಾಲಿಕೆ ಚುನಾವಣೆಯನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಬರುವ ಮಹಾನಗರ ಪಾಲಿಕೆ ಚುನಾವಣೆ ಸಾಕಷ್ಟು ಸವಾಲಿನಿಂದ ಕೂಡಿದೆ. ಸದ್ಯ ನಾನು ಕೂಡ ಕೇವಲ ಶಾಸಕನಾಗಿದ್ದೇನೆ. ಇದು ನನ್ನ ಬೆಂಬಲಿಗರಿಗೆ ಅಸಮಾಧಾನ ತರಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಾಯಾಸದ ಗೆಲುವಿನ ಪಾಠ ನಮ್ಮ ಮುಂದಿದೆ. ಈಗ ನನಗೆ ಸಚಿವನಾಗುವ ಮನಸ್ಸು ಇಲ್ಲ. ನಮ್ಮ ಜಿಲ್ಲೆಯ ಶಾಸಕರಾದ ಮಹೇಶ್ ಕುಮಠಳ್ಳಿ ಇಲ್ಲವೇ ಈ ಹಿಂದೆ ಸಚಿವರಾಗಿದ್ದ ಶ್ರೀಮಂತ ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಿದ್ದಾರೆ ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಬೇಕಿದೆ. ಹೀಗಾಗಿ ಈ ಇಬ್ಬರಲ್ಲಿ ಒಬ್ಬರಿಗಾದರೂ ಬೆಳಗಾವಿ ಜಿಲ್ಲೆಯ ಕೋಟಾದಲ್ಲಿ ಸಚಿವ ಸ್ಥಾನ ನೀಡುವಂತೆ ರಮೇಶ್ ಮನವಿ ಮಾಡಲು ಮುಂದಾಗಿದ್ದಾರಂತೆ.
ಇನ್ನು, ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ರಮೇಶ್ ಜಾರಕಿಹೊಳಿ ಹೀಗೆ ಪ್ಲಾನ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಮಾತಿಗೆ ಹೈಕಮಾಂಡ್ ಮನ್ನಣೆ ನೀಡಲಿದೆಯಾ? ಒಂದು ವೇಳೆ ನೀಡದಿದ್ದರೆ ಇದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆಯಾ? ಎಂದು ಕಾದು ನೋಡಬೇಕಿದೆ.