ಬೆಂಗಳೂರು: ಸಿಡಿ ಹೊರಬಂದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಳಿಕ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ‘ನನ್ನ ಪರವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ವಂದನೆ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿಗೆ ನನ್ನ ವಂದನೆಗಳು. ನೂರಕ್ಕೆ ನೂರರಷ್ಟು ಈ CD ನಕಲಿ. ನಾನು ನಿರಪರಾಧಿ, ಅಪರಾಧಿಯಲ್ಲ’ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಈ CD ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು. 26 ಗಂಟೆ ಮೊದಲೇ ಹೈಕಮಾಂಡ್ ನನಗೆ CD ಬಿಡುಗಡೆ ಬಗ್ಗೆ ನನಗೆ ಮಾಹಿತಿ ನೀಡಿದ್ದರು. ನಾನು ಧೈರ್ಯದಿಂದ ಕಾನೂನು ಹೋರಾಟಕ್ಕೆ ಹೋಗಲಿಲ್ಲ. ಯಾವುದಕ್ಕೂ ಹೆದರದೆ ಸಭೆ ಮುಗಿಸಿ ಮನೆಗೆ ಬಂದಿದ್ದೆ. ಅಂದು ವಚನಾನಂದಶ್ರೀ ಜತೆಯೂ ಮಾತುಕತೆ ನಡೆಸಿದ್ದೆ. ‘ನಾನು ಬಹಳ ದುಃಖದಲ್ಲಿದ್ದೇನೆ’. ದಯವಿಟ್ಟು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 2020ರ ಫೆಬ್ರವರಿ 26ರಂದು ನಾನು ಸಚಿವನಾದೆ. 4-5 ದಿನದಿಂದ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದು ರಮೇಶ್ ಜಾರಕಿಹೊಳಿ ಕಣ್ಣೀರು ಹಾಕಿದ್ದಾರೆ.