ಬೆಂಗಳೂರು: ಇಡೀ ದೇಶ ಕೊರೋನಾ ವೈರಸ್ ಭೀತಿ ಎದುರಿಸುತ್ತಿದ್ದು, ಏಪ್ರಿಲ್ 14ರವರೆಗೆ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಇತ್ತ ಕೊರೋನಾ ಪರಿಸ್ಥಿತಿ ನಿಯಂತ್ರಣ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಿರುವುದಿರಿಂದ ಆರೋಗ್ಯ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ವಿಚಾರವಾಗಿ ಶ್ರೀರಾಮುಲು ಸಿಎಂ ಮೇಲೆ ಗರಂ ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸರಿ ಸಮಾನವಾಗಿ ಅಧಿಕಾರ ಹಂಚಿದ್ದಕ್ಕೆ ರಾಮುಲು ಸಿಎಂ ಬಿಎಸ್ವೈ ಬಳಿ ಗರಂ ಆಗಿದ್ದಾರೆ. ಸುಧಾಕರ್ಗೆ ನನ್ನ ಇಲಾಖೆಯಲ್ಲಿ ಅಧಿಕಾರ ನೀಡಿರುವುದರಿಂದ ನಾನು . ಅನ್ನೋ ಸಂದೇಶ ರವಾನೆ ಆಗಿದೆ.
ಹಾಗಾಗಿ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸಿಎಂಗೆ ಶ್ರೀರಾಮುಲು ಒತ್ತಡ ಹಾಕಿದ್ದಾರೆ.
ಒಂದು ಹಂತದಲ್ಲಿ ಶ್ರೀರಾಮುಲು ಸಿಎಂಗೆ ಪರೋಕ್ಷವಾಗಿ ರಾಜೀನಾಮೆ ಬೆದರಿಕೆಯನ್ನೂ ಒಡ್ಡಿದ್ದಾರೆ ಎನ್ನಲಾಗಿದೆ. ರಾಮುಲು ಗರಂ ಆದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ
ಆದೇಶದಲ್ಲಿ ಸಿಎಂ ಮಾರ್ಪಾಡು ಮಾಡಿದ್ದಾರೆ. ಡಾ.ಸುದಾಕರ್ಗೆ ಬೆಂಗಳೂರು ನಗರ ಜವಾಬ್ದಾರಿ ನೀಡಲಾಗಿದೆ. ವಾರ್ ರೂಮ್ ಜಬಾಬ್ದಾರಿ ಜೊತೆಗೆ ಇಡೀ ರಾಜ್ಯದ ಹೊಣೆಗಾರಿಕೆಯನ್ನು ರಾಮುಲುಗೆ ವಹಿಸಲಾಗಿದೆ.
ಕೇವಲ ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿದ್ದಕ್ಕೆ ಡಾ.ಸುಧಾಕರ್ ಕೂಡ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದಿಢೀರನ್ನೇ ಆದೇಶ ಮಾರ್ಪಾಟು ಮಾಡಿದ್ದರಿಂದ ಸಿಎಂ ಮೇಲೆ ಸುಧಾಕರ್ ಬೇಸರಗೊಂಡಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿದೆ.
ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಇಬ್ಬರು ಸಚಿವರು ಅಧಿಕಾರ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವುದಕ್ಕೆ ವ್ಯಾಪಕ ಟೀಕೆಗಳು ಸಹ ವ್ಯಕ್ತವಾಗಿವೆ. ಸದ್ಯ ರಾಜ್ಯ ಸೇರಿದಂತೆ ದೇಶ ಎದುರಿಸುತ್ತಿರುವ ವಿಪತ್ತಿನಿಂದ ಪಾರಾಗುವ ಬಗೆಯನ್ನು ಚಿಂತಿಸಬೇಕಾಗಿದೆ. ಇಂತಹ ಸಮಯದಲ್ಲಿ ಸಚಿವ ಅಧಿಕಾರ ಅಸಮಾಧಾನ ಎಲ್ಲರಲ್ಲೂ ಬೇಸರ ತರಿಸಿದೆ.