ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮೂರು ತಿಂಗಳು ಜೈಲುವಾಸ ಅನುಭವಿಸಿದ್ದ ವೀರ ಸಾವರ್ಕರ್ ಐತಿಹಾಸಿಕ ಹಿನ್ನೆಲೆಯ ಸ್ಮರಣೆಗಾಗಿ ಜೈಲಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಳವಡಿಸಿದ್ದ ಫೋಟೋ ಮತ್ತಿತರ ದಾಖಲೆಗಳನ್ನು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತೆಗೆದು ಹಾಕಿದ್ದಾರೆ.
ಇದನ್ನು ಖಂಡಿಸಿ ಜು.13ರಂದು ಹಿಂಡಲಗಾ ಕಾರಾಗೃಹದ ಎದುರು ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರವಿಕುಮಾರ ಸೇರಿದಂತೆ ವಿಎಚ್ಪಿ, ಆರ್ಎಸ್ಎಸ್ನ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ.
ಆಗಸ್ಟ್ ಮೊದಲ ವಾರದಲ್ಲಿ ಸಾವರ್ಕರ್ ಅಭಿಮಾನಿಗಳ ನಿಯೋಗದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನೂ ಭೇಟಿ ಮಾಡಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸೋನಾಲಿ ಸರ್ನೋಬತ್, ವೆಂಕಟೇಶ ಶಿಂಧೆ, ವಿನಯ ಅಂಗ್ರೊಳ್ಳಿ, ಬಾಳು ಪವಾರ ಇತರರಿದ್ದರು.
ಪ್ರತಿಮೆ ಸ್ಥಾಪಿಸಲಿ: ಹಿಂಡಲಗಾ ಕಾರಾಗೃಹ ಆವರಣದಲ್ಲಿ ಸಾವರ್ಕರ್ ಪ್ರತಿಮೆ ಪ್ರತಿಷ್ಠಾಪಿಸಬೇಕು. ಜೈಲಿನಲ್ಲೇ ಅವರ ಜಯಂತಿ ಮತ್ತು ಪುಣ್ಯತಿಥಿ ನಡೆಯಬೇಕು. ಬಸ್, ರೈಲ್ವೆ ಹಾಗೂ ವಿಮಾನ ನಿಲ್ದಾಣದಲ್ಲಿ ಸಾವರ್ಕರ್ ಜೈಲುವಾಸದ ಇತಿಹಾಸ ಪರಿಚಯಿಸುವ ಮಾಹಿತಿ ಫಲಕ ಅಳವಡಿಸಬೇಕು ಎಂದು ಮುತಾಲಿಕ ಆಗ್ರಹಿಸಿದರು.
Laxmi News 24×7