ಬೆಂಗಳೂರು: ಎಸ್.ಆರ್ ವಿಶ್ವನಾಥ್ ಜೊತೆ ಜಟಾಪಟಿ ಮುಗಿದ ವಿಚಾರ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಂಸದ ಡಾ.ಸುಧಾಕರ್ ಅವರು ತಿಳಿಸಿದ್ದಾರೆ.
ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಅವರು ನಮ್ಮನ್ನು ಕರೆದಿದ್ದರು. ನಮ್ಮ ಭಾಗದಲ್ಲಿ ಅನ್ಯೋನ್ಯವಾಗಿ ಬಿಜೆಪಿಯನ್ನು ಸದೃಢವಾಗಿ ಕಟ್ಟಬೇಕು. ಪರಸ್ಪರ ಏನೇ ಭಿನ್ನಾಭಿಪ್ರಾವಿದ್ದರೂ ಅದು ಪಕ್ಷದ ಮೇಲೆ ಪ್ರಭಾವ ಆಗಬಾರದು. ಪಕ್ಷಕ್ಕೆ ನಷ್ಟ ಆಗಬಾರದೆಂದು ಹೇಳಿದ್ದು, ಒಪ್ಪಿದ್ದೇವೆ. ಸಣ್ಣಪುಟ್ಟ ಅಭಿಪ್ರಾಯ ಹೇಳಿದ್ದೇವೆ ಎಂದಿದ್ದಾರೆ.
ಪಕ್ಷದ ಅಡಿಯಲ್ಲಿ ಪಕ್ಷಕ್ಕೆ ನಷ್ಟ ಆಗದಂತೆ ಸದೃಢವಾಗಿ ನಮ್ಮ ನಮ್ಮ ಕಾರ್ಯವ್ಯಾಪ್ತಿಯಲ್ಲಿ ಹೇಗೆ ಸಂಘಟನೆ ಮಾಡಬೇಕು? ಹೇಗೆ ಪಕ್ಷವನ್ನು ಒಳ್ಳೆಯ ರೀತಿ ಕಟ್ಟಬೇಕೆಂಬ ಬಗ್ಗೆ ಅಂಶಗಳು ಚರ್ಚೆ ಆಗಿವೆ. ಪಕ್ಷ ಸಂಘಟನೆ ವೇಳೆ ಸ್ವಲ್ಪ ವ್ಯತ್ಯಾಸಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಪಕ್ಷದ ಹಿತದೃಷ್ಟಿಯಿಂದ ನಾವೆಲ್ಲ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೇಡಿಕೆಯೂ ಇಲ್ಲ; ದೂರುಗಳೂ ಇಲ್ಲ. ಇದು ಪ್ರಬುದ್ಧ ನಾಯಕರ ನಡುವಿನ ಚರ್ಚೆ ಅಷ್ಟೇ ಎಂದು ನುಡಿದಿದ್ದಾರೆ.
Laxmi News 24×7